ADVERTISEMENT

ಮುಕ್ತಕ-ಚುಟುಕು; ಸೆಳೆಯಲಿಲ್ಲ ಸಹೃದಯರನ್ನು!

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 9:10 IST
Last Updated 20 ಅಕ್ಟೋಬರ್ 2012, 9:10 IST

ಮೈಸೂರು: `ಮುಕ್ತಕ-ಚುಟುಕು ಕವಿಗೋಷ್ಠಿಯೋ ಅಥವಾ ಕವಿಗೋಷ್ಠಿಯೋ?~- ಇದು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಸೇರಿದ್ದ ಸಹೃದಯರ ಪ್ರಶ್ನೆಯಾಗಿತ್ತು.

ದಸರಾ ಉಪ ಸಮಿತಿಯು ಆಯೋಜಿಸಿದ್ದ ಗೋಷ್ಠಿಯಲ್ಲಿ ಕವಿಗಳು ಮುಕ್ತಕ- ಚುಟುಕುಗಳಿಂತ ಹೆಚ್ಚಾಗಿ ದೀರ್ಘವಾದ ಕವಿತೆಗಳನ್ನು ವಾಚಿಸಿದರು. ಹೆಚ್ಚಿನ ಕವಿತೆಗಳು ಕಳಪೆ ಯಾಗಿದ್ದವು. ಜೊತೆಗೆ ಸ್ಥಳೀಯರೇ ಹೆಚ್ಚಾಗಿದ್ದರು. ಹೀಗಾಗಿ ಉಪ  ಸಮಿತಿಯ ಆಯ್ಕೆ ಬಗ್ಗೆ ಹಲವರು ಅನುಮಾನ ವ್ಯಕ್ತ ಪಡಿಸಿದರು. `ನಾವು ಮುಕ್ತಕ-ಚುಟುಕುಗಳನ್ನೇ ಓದುವಂತೆ ಸೂಚಿಸಿದ್ದೆವು. ಆದರೆ ಕವಿಗಳು ಕವಿತೆಗಳನ್ನು ವಾಚನ ಮಾಡಿದರು~ ಎಂದು ಉಪ ಸಮಿತಿ ಪದಾಧಿಕಾರಿಯೊಬ್ಬರು ಅಸಹಾಯಕತೆಯನ್ನು ವ್ಯಕ್ತಪಡಿಸಿದರು.

ಒಂದಿಷ್ಟು ಕಚಗುಳಿ: ಗುರುರಾಜಾಚಾರ್ ವಾಚಿಸಿದ `ಇಂಥ ಮುಪ್ಪು ಬರಬಾರದು ರೀ~ ಕವಿತೆ ಸಭಾಂಗಣದಲ್ಲಿ ಕಚಗುಳಿ ಇಟ್ಟಿತ್ತು. ಕಪ್ಪು ಕೂದಲು ಬೆಳಗಾದವು, ಕೂದಲು ಉದುರಿ ಬೋಳಾದವು ಮುಪ್ಪು ಬರಬಾರದು ರೀ.. ಎಂದಾಗ ವಿದ್ಯಾರ್ಥಿಗಳು ಕೇಕೆ ಹಾಕಿದರು.

ಪ್ರಭಾಕರ ಹೆಗ್ಗಂದೂರು ಅವರು ವಾಚಿಸಿದ ಚುಟುಕು ಗಮನ ಸೆಳೆಯಿತು. ಬರ, ಪ್ರವಾಹ ಪರಿಹಾರ ಕಾಮಗಾರಿಗೆ ಬಿಡುಗಡೆಯಾದ ಹಣ ಬೆಂಗಳೂರಿನಲ್ಲಿ ಮುಳುಗಡೆ ಎಂದಾಗ ಚಪ್ಪಾಳೆ ಸುರಿಮಳೆ ಆಯಿತು. ರಾಜಶೇಖರ ಜಮದಂಡಿ ಅವರು ಪ್ರಶ್ನೋತ್ತರ ಚುಟುಕು ವ್ಯವಸ್ಥೆಯನ್ನು ಕುಟುಕಿದ್ದು ಹೀಗೆ-ಶಿಕ್ಷಕ ಕೇಳಿದ ಶಿಷ್ಯನಿಗೆ, ಸತ್ಯ ಎಂದರೆ ಹೇಗಿರಬೇಕು? ಥಟ್ಟನೆ ಹೇಳುವ ಸಿದ್ದ, ಸಾಮ್ರಾಜ್ಯ, ಹೆಂಡತಿ, ಮಗನನ್ನು ಮಾರುವ ಹೇಗೆ.

ಕಂಪಲಾಪುರ ಗೋಪಾಲ ಓದಿದ `ನಾನು, ನಾನು~ ಚುಟುಕು ಸ್ವಾರ್ಥಿ ಮತ್ತು ಅಹಂಕಾರಿ ರಾಜಕಾರಣಿಯನ್ನು ಅಣಕಿಸುವಂತಿತ್ತು. ಇವರೇ ವಾಚಿಸಿದ ಶ್ವಾನಪ್ರೇಮಿಯೂ ಚಪ್ಪಾಳೆ ಗಿಟ್ಟಿಸಿತು. ಚಾಂದ್ ಬಾಷಾ ಕನ್ನಡದ ಶಾಯಿರಿ ಓದಿದರು.

ಸತೀಶ್ ಜವರೇಗೌಡ ಹಾಯ್ಕುಗಳನ್ನು ವಾಚಿಸಿ ಗಮನ ಸೆಳೆದರು. ಕೆ.ಬಿ.ಗುರುಮಲ್ಲಮ್ಮ, ಭಾಗ್ಯಲಕ್ಷ್ಮಣ್, ಮಂಜೇ ಗೌಡ ನಾಯಕರಹಳ್ಳಿ, ಕೊಡಗಹಳ್ಳಿ ಪುರುಷೋತ್ತಮ, ಎ.ಸಂಗಪ್ಪ, ಸುಶೀಲ ಸೋಮಶೇಖರ, ಮಂಜುಳ ಮಾನಸ, ಜೋಗನಹಳ್ಳಿ ಗುರುಮೂರ್ತಿ, ಬಲ್ಲೇನಹಳ್ಳಿ ಶಂಕರ್, ಲತಾ ಮೋಹನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ಅಧ್ಯಕ್ಷತೆಯನ್ನು ವಿಶ್ರಾಂತ ಕುಲಪತಿ ಪ್ರೊ.ಎಚ್.ಜೆ. ಲಕ್ಕಪ್ಪಗೌಡ ವಹಿಸಿದ್ದರು. ಕವಿ ಪ್ರೊ.ಮ.ನ.ಜವರಯ್ಯ, ಮಹಾರಾಜ ಕಾಲೇಜು ಪ್ರಾಂಶುಪಾಲ ಡಾ.ಸಿ.ಬಿ. ರಾಮಚಂದ್ರ, ಯುವರಾಜ ಕಾಲೇಜಿನ ಪ್ರಾಂಶುಪಾಲ ಪ್ರೊ.ಸ.ನ.ಗಾಯತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.