ADVERTISEMENT

ರಸಗೊಬ್ಬರ ಕೊರತೆ: ರೈತರು ಕಂಗಾಲು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:15 IST
Last Updated 8 ಅಕ್ಟೋಬರ್ 2012, 8:15 IST

ಸಾಲಿಗ್ರಾಮ: ಅಗತ್ಯದಷ್ಟು ರಸಗೊಬ್ಬರ ಸಿಗದ ಕಾರಣ ರೈತರು ದುಪ್ಪಟ್ಟು ಬೆಲೆ ಕೊಟ್ಟು ರಸಗೊಬ್ಬರ ಖರೀದಿಸುವ ಸ್ಥಿತಿ ಬಂದಿದೆ. ಚುಂಚನಕಟ್ಟೆ ಹೋಬಳಿ ವ್ಯಾಪ್ತಿಯ ಹೊಸೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ರೈತರು ಯೂರಿಯಾ ಗೊಬ್ಬರ ಖರೀದಿಗಾಗಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಬತ್ತದ ನಾಟಿ ಕಾರ್ಯ ಮುಗಿದ 15 ದಿನಗಳ ಒಳಗೆ ಯೂರಿಯಾ ರಸಗೊಬ್ಬರವನ್ನು ಹಾಕಬೇಕು. ಇಲ್ಲದಿದ್ದರೆ ಬೆಳೆಯ ಬೆಳವಣಿಗೆ ಕುಂಠಿತವಾಗುತ್ತದೆ. ಹೀಗಾಗಿ ಶತಾಯ-ಗತಾಯ ರಸಗೊಬ್ಬರ ಪಡೆಯಲು ರೈತರು ಹವಣಿಸುತ್ತಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಂದೆ ದಿನವಿಡೀ ನಿಂತರೂ ರಸಗೊಬ್ಬರ ಸಿಗುತ್ತಿಲ್ಲ.

ಈಚೆಗಷ್ಟೇ ಹೊಸೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಯೂರಿಯಾ ರಸಗೊಬ್ಬರ ದಾಸ್ತಾನು ಬಂದಿದ್ದೇ ತಡ, ಬೆಳಗಾಗು ವಷ್ಟರಲ್ಲಿ ರೈತರು ಮಳಿಗೆ ಮುಂದೆ ಜಮಾಯಿಸಿದ್ದರು. ಆದರೆ, ಅರ್ಧ ದಷ್ಟು ರೈತರಿಗೆ ಮಾತ್ರ ಗೊಬ್ಬರ ಸಿಕ್ಕಿತು.

ಚಾಮರಾಜ ಎಡದಂಡೆ, ಬಲದಂಡೆ ಹಾಗೂ ರಾಮಸಮುದ್ರ ನಾಲೆಯ ನೀರನ್ನು ನಂಬಿ ಬೇಸಾಯ ಮಾಡುತ್ತಿದ್ದ ರೈತರಿಗೆ ನೀರಿನ ಅಭಾವವೂ ಇದೆ. ಈಗ ಗೊಬ್ಬರ ಕೊರತೆಯಿಂದ ರೈತರು ಮತ್ತಷ್ಟು ಕಂಗಾಲಾಗಿದ್ದಾರೆ. ಇದರ ಲಾಭ ಪಡೆದುಕೊಳ್ಳಲು ಕೆಲವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲೂ ದುಪ್ಪಟ್ಟು ಬೆಲೆಗೆ ಗೊಬ್ಬರ ಮಾರಾಟ ಮಾಡಲಾಗುತ್ತಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.