ADVERTISEMENT

ಸಿದ್ದು ಕನಸು ಭಗ್ನಗೊಳಿಸಲು ಕೆಜೆಪಿ, ಜೆಡಿಎಸ್ ತಂತ್ರ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 6:19 IST
Last Updated 10 ಏಪ್ರಿಲ್ 2013, 6:19 IST

ಮೈಸೂರು: ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿರುವ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಮಣಿಸಿ, ಅವರ ಕನಸನ್ನು ಭಗ್ನ ಮಾಡಬೇಕು ಎಂದು ಕೆಜೆಪಿ ಮತ್ತು ಜೆಡಿಎಸ್ ರಣತಂತ್ರ ರೂಪಿಸುತ್ತಿವೆ. ಹೀಗಾಗಿ ವರುಣಾ ಕ್ಷೇತ್ರದಲ್ಲಿ ಈ ಬಾರಿ ತೀವ್ರ ಹೋರಾಟ  ನಡೆಯಲಿದ್ದು, ರಾಜ್ಯದ ಗಮನ ಸೆಳೆಯಲಿದೆ.

ಕ್ಷೇತ್ರ ಪುನರ್ ವಿಂಗಡಣೆಯಿಂದ ಮೈಸೂರು ತಾಲ್ಲೂಕಿನ ವರುಣಾ ಹೋಬಳಿ, ತಿ.ನರಸೀಪುರ ತಾಲ್ಲೂಕಿನ ಕಸಬಾ, ನಂಜನಗೂಡು ತಾಲ್ಲೂಕಿನ ಚಿಕ್ಕಯ್ಯನಛತ್ರ ಹೋಬಳಿ, ಬಿಳಿಗೆರೆ ಮತ್ತು ದೊಡ್ಡಕೌಲಂದೆ ಹೋಬಳಿಯ ಭಾಗಶಃ ಹಳ್ಳಿಗಳನ್ನು ಒಳಗೊಂಡಂತೆ ರಚನೆಗೊಂಡದ್ದೆ ವರುಣಾ ಕ್ಷೇತ್ರ. 

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಐದು ಬಾರಿ ಗೆದ್ದಿದ್ದ ಸಿದ್ದರಾಮಯ್ಯ 2008 ನೇ ಸಾಲಿನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ಮೊದಲ ಬಾರಿಗೆ  ಸ್ಪರ್ಧಿಸಿ ಯಶಸ್ಸು ಸಹ ಕಂಡರು. ಸಿದ್ದರಾಮಯ್ಯ 71,908 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಎಲ್.ರೇವಣಸಿದ್ದಯ್ಯ 53,060 ಮತಗಳನ್ನು ಪಡೆದು ಪರಾಭವಗೊಂಡಿದ್ದರು. 

ಎರಡನೇ ಬಾರಿಗೆ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ತಮ್ಮ  ಆಪ್ತ ಸಹಾಯಕ ಕಾ.ಪು.ಸಿದ್ದಲಿಂಗಸ್ವಾಮಿ ಅವರನ್ನು ಕೆಜೆಪಿಯಿಂದ ಕಣಕ್ಕೆ ಇಳಿ ಸಿದ್ದಾರೆ. ನಿವೃತ್ತ ಎಸಿಪಿ ಚಲುವರಾಜು ಅವರು ಜೆಡಿಎಸ್‌ನಿಂದ ಟಿಕೆಟ್ ಗಿಟ್ಟಿಸಿ ಕಣಕ್ಕೆ ಇಳಿದಿದ್ದಾರೆ. ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಎಸ್.ಡಿ. ಮಹೇಂದ್ರ ಬಿಜೆಪಿಯಿಂದ ಟಿಕೆಟ್ ಪಡೆದಿದ್ದಾರೆ. ಬಿಎಸ್ಪಿ,  ಬಿಎಸ್‌ಆರ್ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಇದೆ.

ಕ್ಷೇತ್ರದಲ್ಲಿ ಒಟ್ಟು 1,91,580 ಮತದಾರರು ಇದ್ದಾರೆ. ಈ ಕ್ಷೇತ್ರದಲ್ಲಿ ವೀರಶೈವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅಲ್ಲದೆ ಕುರುಬರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಕ್ಕಲಿಗರು, ಅಲ್ಪಸಂಖ್ಯಾತ ಮತದಾರರೂ ಇದ್ದಾರೆ. ಕಾ.ಪು. ಸಿದ್ದಲಿಂಗಸ್ವಾಮಿ ಲಿಂಗಾಯತರಾದರೆ, ಜೆಡಿಎಸ್‌ನ ಚಲುವರಾಜು ನಾಯಕ ಸಮುದಾಯಕ್ಕೆ ಸೇರಿದವರು. ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿ,  ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಬೇಕು ಎಂದು ಕೆಜೆಪಿ ಮತ್ತು ಜೆಡಿಎಸ್ ಜಿದ್ದಿಗೆ ಬಿದ್ದು ತಂತ್ರಗಳನ್ನು ರೂಪಿಸುವುದರಲ್ಲಿ ನಿರತವಾಗಿವೆ. ತಮ್ಮ  ಸಮುದಾಯದ ಮತದಾರರೊಂದಿಗೆ ಹಲವಾರು ಬಾರಿ ಸಭೆ ನಡೆಸಿರುವ ಇರವು ಸಿದ್ದರಾಮಯ್ಯ ಸೋಲಿಸುವ ಮೂಲಕ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿ ಯುವುದನ್ನು ತಪ್ಪಿಸಲು ಪಣ ತೊಡು ವಂತೆ ಕರೆ ನೀಡುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರವನ್ನು ಆರಂಭಿಸಿದ್ದಾರೆ.

ಕುರುಬ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯ ರಾಜ್ಯದಲ್ಲಿ ವರ್ಚಸ್ಸು ಹೊಂದಿರುವ ನಾಯಕ. ಆಡಳಿತದಲ್ಲಿ ಅಪಾರ ಅನುಭವ ಹೊಂದಿರುವ ಸಿದ್ದರಾಮಯ್ಯ ವಿವಿಧ ಖಾತೆಗಳ ಸಚಿವರಾಗಿ, ಉಪ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದರಲ್ಲದೆ, ಹಣಕಾಸು ಮಂತ್ರಿಯಾಗಿ 7 ಬಾರಿ ಬಜೆಟ್  ಮಂಡಿಸಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದದ್ದೇ ಆದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಸಿದ್ದರಾಮಯ್ಯ ಎದುರು ಸ್ಪರ್ಧೆಗೆ ಇಳಿದಿರುವ ಕಾ.ಪು.ಸಿದ್ದಲಿಂಗಸ್ವಾಮಿ, ಚಲುವರಾಜು ಮತ್ತು ಮಹೇಂದ್ರ ಅವರು ಇದೇ ಮೊದಲ ಬಾರಿಗೆ  ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿ ಸುತ್ತಿರುವುದು. ಪ್ರಭಾವಿ ನಾಯಕ ಸಿದ್ದರಾಮಯ್ಯರನ್ನು ಮಣಿಸುವುದು ಅಷ್ಟು ಸುಲಭವಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.