ADVERTISEMENT

ಸುಮಂತ್ ರಾಕೆಟ್‌ಗೆ ಮೇಯರ್ ಕಪ್

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 8:50 IST
Last Updated 13 ಫೆಬ್ರುವರಿ 2012, 8:50 IST

ಮೈಸೂರು: ತೊಣಚಿಕೊಪ್ಪಲಿನ ಬಿಸಿಲುಮಾರಮ್ಮನ ಜಾತ್ರಾ ಮಹೋತ್ಸ ವದ ಅಂಗವಾಗಿ ಭಾನುವಾರ ನಡೆದ ಕಾಟಾ ಕುಸ್ತಿ ಪಂದ್ಯಾವಳಿಯಲ್ಲಿ ಹೊಸ ಹಳ್ಳಿ ಹತ್ತು ಜನಗಳ ಗರಡಿಯ ಪೈಲ್ವಾನ್ ಸುಮಂತ್ ರಾಕೆಟ್ `ಮೇಯರ್ ಕಪ್~ ಗೆದ್ದುಕೊಂಡರು.

ಹುಣಸೂರು ಜೈಮಾರುತಿ ಗರಡಿಯ ಪೈಲ್ವಾನ್ ಸೋಮಶೇಖರ್ ವಿರುದ್ಧ ಸೆಣಸಾಡಿ ಸುಮಂತ್ ಮೇಯರ್ ಕಪ್ ಅನ್ನು ತಮ್ಮದಾಗಿಸಿಕೊಂಡರು. 20 ನಿಮಿಷಗಳ ಕಾಲ ನಡೆದ ಈ ಪಂದ್ಯ ಸಾಕಷ್ಟು ರೋಚಕವಾಗಿತ್ತು.

ಜನರು ಬಿಸಿಲನ್ನು ಲೆಕ್ಕಿಸದೇ ಕುಸ್ತಿ ಪಂದ್ಯಾವಳಿ ವೀಕ್ಷಿಸಿದರು. 25ಕ್ಕೂ ಹೆಚ್ಚು ಜೋಡಿ ಅಖಾಡದಲ್ಲಿ ಪಟ್ಟು ಗಳನ್ನು ಪ್ರದರ್ಶಿಸಿದವು. ಅವುಗಳಲ್ಲಿ ಮೈಸೂರು ಇಸ್ಕಿಯಾನ್ ಗರಡಿಯ ಪೈಲ್ವಾನ್ ತಬ್ರೇಜ್ ಪಠಾಣ್ ಹಾಗೂ ಪೈಲ್ವಾನ್ ವೀರಪ್ಪ, ಹೊಸಹಳ್ಳಿ ಹತ್ತು ಜನಗಳ ಗರಡಿಯ ಪೈಲ್ವಾನ್ ರವಿ ಹುಲಿಮರಿ ಹಾಗೂ ಮೇಳಾಪುರ ಹತ್ತು ಜನಗಳ ಗರಡಿಯ ಪೈಲ್ವಾನ್ ವಿನಯ್‌ಕುಮಾರ್ ಕಾದಾಟ ಆಕರ್ಷಕವಾಗಿತ್ತು.

ಗಂಜಾಂನ ಪೈಲ್ವಾನ್ ಸ್ಟಾರ್ ಸುನಿಲ್ ಹಾಗೂ ಕನಕಪುರ ಚಾವಡಿ ಹತ್ತು ಜನಗಳ ಗರಡಿಯ ಪೈಲ್ವಾನ್ ರವಿ ಅವರ ನಡುವೆ ನಡೆದ ಪಂದ್ಯದಲ್ಲಿ ರವಿ ಜಯಗಳಿಸಿದರು. ಮೈಸೂರು ಫಕೀರ್ ಅಹಮದ್ ಸಾಹೇಬರ ಗರಡಿಯ ಪೈಲ್ವಾನ್ ರಘು ಹಾಗೂ ದೇವಾರಸನಹಳ್ಳಿ ಹತ್ತು ಜನಗಳ ಗರಡಿಯ ನಾಗಕೀರ್ತಿ ಅವರ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿತು.

ಕುಸ್ತಿ ಪಂದ್ಯಾವಳಿಯನ್ನು ಶಾಸಕ ಎಂ.ಸತ್ಯನಾರಾಯಣ ಉದ್ಘಾಟಿಸಿದರು. ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಬೀರೇಶ್ವರಸ್ವಾಮಿ   ಟ್ರಸ್ಟ್ ಅಧ್ಯಕ್ಷ ಸಿ.ಜವರಪ್ಪ, ಮುಖಂಡ ರಾದ ಜವರಯ್ಯ, ಬೀರಪ್ಪ, ಟ್ರಸ್ಟ್ ನಿರ್ದೇಶಕರಾದ ಗುಂಡಯ್ಯ, ಬೋರಪ್ಪ, ಕರಿಯಪ್ಪ, ಕಾರ್ಯದರ್ಶಿ ಟಿ.ಬಿ.ಚಿಕ್ಕಣ್ಣ, ಖಜಾಂಚಿ ಮಿಣ್ಣಯ್ಯ  ವೇದಿಕೆಯಲ್ಲಿದ್ದರು. ಪಂದ್ಯಾವಳಿಯನ್ನು ಬೀರೇಶ್ವರಸ್ವಾಮಿ ಟ್ರಸ್ಟ್ ಏರ್ಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.