ADVERTISEMENT

‘ಕೈಗಾರಿಕಾ ಎಕ್ಸ್‌ಪೋ’ ಕಾರ್ಯಕ್ರಮಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 9:06 IST
Last Updated 21 ಮಾರ್ಚ್ 2014, 9:06 IST
ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಗುರುವಾರ ನಡೆದ ಕೈಗಾರಿಕಾ ಎಕ್ಸ್‌ಪೋ ಕಾರ್ಯಕ್ರಮದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವುದಾಗಿ ಹೂಡಿಕೆದಾರರು ಮತ್ತು ಸರಬರಾಜುದಾರರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಗುರುವಾರ ನಡೆದ ಕೈಗಾರಿಕಾ ಎಕ್ಸ್‌ಪೋ ಕಾರ್ಯಕ್ರಮದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವುದಾಗಿ ಹೂಡಿಕೆದಾರರು ಮತ್ತು ಸರಬರಾಜುದಾರರು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.   

ಮೈಸೂರು: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಅಭಿವೃದ್ಧಿ ಸಂಸ್ಥೆ (ಎಂಎಸ್‌ಎಂಇ) ವತಿಯಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಗುರುವಾರ ರಾಷ್ಟ್ರೀಯ ಖರೀದಿದಾರರ ಮತ್ತು ಸರಬರಾಜುದಾರರ ಉತ್ಪನ್ನಗಳ ಪ್ರದರ್ಶನ– ಸಮಾವೇಶ ಮತ್ತು ‘ಕೈಗಾರಿಕಾ ಎಕ್ಸ್‌ಪೋ– 2014’ ನಡೆಯಿತು.

ಮೈಸೂರು ಪ್ರಿಂಟರ್ಸ್‌ ಕ್ಲಸ್ಟರ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು, ಸನ್‌ ಬಯೊ ಫಾರ್ಮುಲೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌, ನೈಋತ್ಯ ರೈಲ್ವೆ, ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜು, ಬಾಲಾಜಿ ಆಟೊ, ಜೈನ್‌ ಕೈಗಾರಿಕೆ ಮತ್ತು ಕಾಟನ್‌ ವೇಸ್ಟ್‌, ಸಿಂಟೆಕ್ಸ್‌, ಸುಮ್ಮಿತ್‌ ಬ್ಯಾಗ್‌ ಸೇರಿದಂತೆ 48 ಮಳಿಗೆಗಳಲ್ಲಿ ಸಣ್ಣ ಉದ್ದಿಮೆ ದಾರರು ತಮ್ಮ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಿದ್ದರು.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ಪನ್ನಗಳ ಬಗ್ಗೆ ಮಳಿಗೆದಾರರು ಗ್ರಾಹಕರಿಗೆ ಅಗತ್ಯ ಮಾಹಿತಿ ಒದಗಿಸಿದರು. ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಆವಿಷ್ಕರಿಸಿದ ಐಪ್ರಿಂಟ್‌ 3ಡಿ ಯಂತ್ರ ಮತ್ತು ಭತ್ತ ಒಕ್ಕಣೆ ಮಾಡುವ ಸೈಕಲ್‌ ಮಾದರಿಯನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇದು ಎಲ್ಲರ ಗಮನ ಸೆಳೆಯಿತು.

ಬಿಇಎಂಎಲ್‌ ಮುಖ್ಯ ಪ್ರದರ್ಶನ ವ್ಯವಸ್ಥಾಪಕ ಎಚ್‌.ಆರ್‌. ಮುರಳೀಧರ್‌ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ‘2013–14ನೇ ಸಾಲಿನಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಗಿತ್ತು. ಹೀಗಾಗಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಆ ವರ್ಷದಲ್ಲಿ ಸಂಕಷ್ಟ ಎದುರಿಸಿದವು. 2014–15ನೇ ಸಾಲು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪಾಲಿಕೆ ಲಾಭದ ವರ್ಷವಾಗಲಿದೆ ಎಂಬ ಆಶಾಭಾವನೆ ಇದೆ.
ಆರ್ಥಿಕ ಮುಗ್ಗಟ್ಟು ಎದುರಾಗದೆ ಇದ್ದರೆ ಸುಧಾರಿಸಿ ಕೊಳ್ಳಬಹುದು’ ಎಂದರು.

ಮೈಸೂರು ಕೈಗಾರಿಕೆ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್‌ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಸಣ್ಣ ಉದ್ದಿಮೆದಾರರಿಗೆ ಕೇಂದ್ರ ಸರ್ಕಾರದಿಂದ ದೊರಕುವ ಸವಲತ್ತುಗಳು, ಸರಬರಾಜು ಮಾಡಿದ ಉತ್ಪನ್ನಗಳಿಗೆ ಹಣ ನೀಡದಿದ್ದರೆ ವಸೂಲಿ ಮಾಡಲು ಉದ್ದಿಮೆರದಾರರಿಗೆ ನೆರವಾಗುವ ಕಾನೂನಿನ ಬಗ್ಗೆ ಅರಿವು ಮೂಡಿಸಿದರು.

‘ಕಾಸಿಯಾ’ ಪ್ರಧಾನ ಕಾರ್ಯದರ್ಶಿ ಪದ್ಮನಾಭ, ಮೈಸೂರು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಪಿ. ವಿಶ್ವನಾಥ್‌, ಎಂಡಿಎಂಎಸ್‌ಎಂಇಎ ಅಧ್ಯಕ್ಷ ಟಿ.ಡಿ. ಜಯಚಂದ್ರ ಅರಸ್‌, ಉಪ ನಿರ್ದೇಶಕ ಕೆ. ದೇವರಾಜ್‌ ಉಪಸ್ಥಿತರಿದ್ದರು. ಎಂಎಸ್‌ಎಂಇ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಎಸ್.ಎನ್‌. ರಂಗಪ್ರಸಾದ್‌ ಅಧ್ಯಕ್ಷತೆ ವಹಿಸಿದ್ದರು.

ಮತದಾನ ಮಾಡಲು ಪ್ರಮಾಣ
‘ಲೋಕಸಭಾ ಚುನಾವಣೆಯಲ್ಲಿ ಉದ್ದಿಮೆದಾರರು ಮತ್ತು ಕಾರ್ಮಿಕರು ಕಡ್ಡಾಯವಾಗಿ ಮತದಾನ ಮಾಡಬೇಕು. ಸಹೋದ್ಯೋಗಿಗಳು ಮತ್ತು ಸಂಬಂಧಿಕರಿಗೆ ಮತದಾನ ಮಾಡಲು ಪ್ರೇರೇಪಣೆ ನೀಡಬೇಕು’ ಎಂದು ಸುರೇಶ್‌ಕುಮಾರ್‌ ಜೈನ್‌ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಮತ್ತು ಸಭಿಕರಿಗೆ ‘ಪ್ರಮಾಣ ವಚನ’ ಬೋಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.