ADVERTISEMENT

‘ಶಿಕ್ಷಣದಲ್ಲಿ ನೈತಿಕ ಮೌಲ್ಯ ಅಗತ್ಯ’

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 8:52 IST
Last Updated 19 ಸೆಪ್ಟೆಂಬರ್ 2013, 8:52 IST

ಕೆ.ಆರ್.ನಗರ: ‘ಬುದ್ಧ, ಬಸವರಂಥ ಶ್ರೇಷ್ಠ ವ್ಯಕ್ತಿಗಳು ಹಾಕಿಕೊಟ್ಟಂಥ ಚಿಂತನೆಗಳನ್ನು ಮೈಗೂಡಿಸಿಕೊಳ್ಳದೇ ಇರುವುದರಿಂದ ದೇಶದಲ್ಲಿ ಅತ್ಯಾಚಾರ, ಅನಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಸಿ. ಬಸವರಾಜು ಹೇಳಿದರು.

ಇಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಭವನದ ಆಶ್ರಯದಲ್ಲಿ ‘ಗಾಂಧೀಜಿಯವರ ದೃಷ್ಟಿಯಲ್ಲಿ ನೈತಿಕ ಮೌಲ್ಯಗಳು ಮತ್ತು ಶಿಕ್ಷಣ’ ಕುರಿತು ಬುಧವಾರ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾನ್ ವ್ಯಕ್ತಿಗಳು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯದೇ ಇರುವುದರಿಂದ ಎಲ್ಲೆಡೆ ಅತ್ಯಾಚಾರ, ಅನಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ನಮ್ಮ ಜವಾಬ್ದಾರಿಗಳ ಬಗ್ಗೆ ಚಿಂತಿಸದ ನಾವು, ಕೇವಲ ನಮಗೆ ಒದಗಬೇಕಾದ ಅನುಕೂಲತೆಗಳ ಬಗ್ಗೆ, ಹಕ್ಕುಗಳ ಬಗ್ಗೆ ಚಿಂತಿಸುತ್ತಿದ್ದೇವೆ.

ಸಮಾಜದಲ್ಲಿ ಬದಲಾವಣೆ ಅವಶ್ಯ, ಹಾಗಂತ ಮೌಲ್ಯಗಳನ್ನು ಗಾಳಿಗೆ ತೂರುವಂತಾಗಬಾರದು. ಇಂದಿನ ಶಿಕ್ಷಣದಲ್ಲಿ ನೈತಿಕ ಮೌಲ್ಯ ಅಳವಡಿಕೆ ಅಗತ್ಯ. ಮೌಲ್ಯಗಳು ನಶಿಸಿ ಹೋಗದಂತೆ ನೋಡಿಕೊಳ್ಳಬೇಕು ಎಂದರು.ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಎಂ. ಕರಿಮುದ್ದೀನ್‌ ಮಾತನಾಡಿ, ಸ್ಪರ್ಧಾತ್ಮಕ ಶಿಕ್ಷಣದ ಒತ್ತಡದಲ್ಲಿ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳು, ಮೌಲ್ಯಾಧಾರಿತ ಶಿಕ್ಷಣ ಮರೆಯಾಗುತ್ತಿವೆ. ಉಪಾಧ್ಯಾಯರು ಮನಸ್ಸು ಮಾಡಿದರೆ ದೇಶ ತಿದ್ದುವ ಕೆಲಸ ಮಾಡಬಹುದು ಎಂದರು.

ಮೈಸೂರು ವಿಶ್ವವಿದ್ಯಾನಿಲಯದ ಗೌರವ ನಿರ್ದೇಶಕಿ ಪ್ರೊ.ಸುಗೀತ ಸುವರ್ಣ, ಪ್ರಾಂಶುಪಾಲ ಪ್ರೊ.ಕೆ.ಆರ್. ದೀಕ್ಷಿತ್, ಶಾರದಮ್ಮ, ಕೆ.ಎಲ್. ರಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.