ತಿ.ನರಸೀಪುರ: ಇಲ್ಲಿನ ಎಟಿಎಂವೊಂದರಲ್ಲಿ ಮುತ್ತಾ (65) ಎಂಬುವವರ ಗಮನ ಬೇರೆಡೆ ಸೆಳೆದು ಎಟಿಎಂ ಕಾರ್ಡ್ನ್ನು ಬದಲಿಸಿ ₹ 2.32 ಲಕ್ಷ ಹಣ ಡ್ರಾ ಮಾಡಿಕೊಂಡು ವಂಚಿಸಿದ್ದ ಆರೋಪಿ ಗುಂಡ್ಲುಪೇಟೆ ಪಟ್ಟಣದ ನಿವಾಸಿ ಬಿಳಿಗಿರಿ ಅಲಿಯಾಸ್ ರಾಜು (22) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಕಳೆದ ವರ್ಷ ಡಿಸೆಂಬರ್ 24ರಂದು ‘ಎಟಿಎಂನಲ್ಲಿ ಹಣ ಡ್ರಾ ಮಾಡುವುದು ಗೊತ್ತಿಲ್ಲ. ಸಹಾಯ ಮಾಡು’ ಎಂದು ಕೇಳಿದ ಮುತ್ತಾ ಅವರ ಎಟಿಎಂ ಕಾರ್ಡ್ನ್ನು ಅವರಿಗೆ ಗೊತ್ತಾಗದ ಹಾಗೆ ತೆಗೆದುಕೊಂಡು, ತನ್ನ ಎಟಿಎಂ ಕಾರ್ಡ್ನ್ನು ಅವರಿಗೆ ನೀಡಿದ್ದ. ಬಳಿಕ ನಿತ್ಯವೂ ಖಾತೆಯಿಂದ ಹಣ ಡ್ರಾ ಮಾಡತೊಡಗಿದ. ಒಟ್ಟು ₹ 2.32 ಲಕ್ಷ ಡ್ರಾ ಆದ ನಂತರ ಬ್ಯಾಂಕಿಗೆ ಹೋದ ಮುತ್ತಾ ಅವರಿಗೆ ವಂಚನೆಯಾಗಿರುವುದು ಅರಿವಿಗೆ ಬಂದಿದೆ. ಇವರು ಫೆ. 17ರಂದು ಪೊಲೀಸ್ ಠಾಣೆಗೆ ದೂರು ನೀಡಿದರು.
ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದ ಪೊಲೀಸರು ಆರೋಪಿಯ ಚಹರೆ ಪತ್ತೆ ಹಚ್ಚಿದರು. ನಂತರ, ಪಟ್ಟಣದ ಎಲ್ಲ ವಸತಿಗೃಹಗಳನ್ನು ಜಾಲಾಡಿದಾಗ ಆರೋಪಿಯು ವಸತಿಗೃಹವೊಂದರಲ್ಲಿ ಕಳೆದ ಒಂದು ತಿಂಗಳಿಂದಲೂ ತಂಗಿರುವುದು ಗೊತ್ತಾಯಿತು. ಈತ ಬೈಕ್ವೊಂದನ್ನು ಖರೀದಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರಿನ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಈತ ಲಾಕ್ಡೌನ್ ವೇಳೆ ಕೆಲಸ ಕಳೆದುಕೊಂಡು ವಾಪಸ್ ಬಂದಿದ್ದ. ನಂತರ, ಕಿಸೆಗಳ್ಳತನ ಸೇರಿದಂತೆ ಇತರೆ ಅಪರಾಧಿಕ ಚಟುವಟಿಕೆಗಳಲ್ಲಿ ತೊಡಗಿದ್ದ ಎಂದು ಅವರು ಹೇಳಿದ್ದಾರೆ. ಪ್ರಕರಣ ತಿ.ನರಸೀಪುರ ಠಾಣೆಯಲ್ಲಿ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.