ADVERTISEMENT

12 ಸಾವಿರ ಆದಿವಾಸಿ ಕುಟುಂಬಗಳಿಗೆ ಹಕ್ಕುಪತ್ರ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2017, 8:54 IST
Last Updated 24 ಅಕ್ಟೋಬರ್ 2017, 8:54 IST

ಮೈಸೂರು: ಕಳೆದ ಹತ್ತು ವರ್ಷಗಳಲ್ಲಿ ರಾಜ್ಯದ 12,020 ಆದಿವಾಸಿ ಕುಟುಂಬಗಳಿಗೆ 16,422 ಎಕರೆ ಅರಣ್ಯ ಜಮೀನು ಹಕ್ಕುಪತ್ರ ವಿತರಿಸಲಾಗಿದ್ದು, ಜಮೀನನ್ನು ಖಾಲಿ ಬಿಡದೆ ಕೃಷಿ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಪ್ರಧಾನ ಕಾರ್ಯದರ್ಶಿ ಇ.ವೆಂಕಟಯ್ಯ ಸಲಹೆ ನೀಡಿದರು.

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ ಸೋಮವಾರ ಇಲ್ಲಿ ಆಯೋಜಿಸಿದ್ದ ‘ಅರಣ್ಯ ಹಕ್ಕು ಕಾಯ್ದೆ’ ಕುರಿತ ಕಾರ್ಯಾ ಗಾರದಲ್ಲಿ ಅವರು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅರಣ್ಯ ಹಕ್ಕು ಕಾಯ್ದೆ–2006ರ ಪ್ರಕಾರ ಅರಣ್ಯ ಜಮೀನು ಹಕ್ಕುಪತ್ರ ವಿತರಿಸಲಾಗಿದೆ. ರಾಜ್ಯದಲ್ಲಿ ಮುಖ್ಯವಾಗಿ ಎಂಟು ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶವಿದೆ. ಇದುವರೆಗೂ 3 ಲಕ್ಷ ಅರ್ಜಿ ಬಂದಿವೆ. ಅದರಲ್ಲಿ ಬುಡಕಟ್ಟು ಸಮುದಾಯದ ಅರ್ಜಿಗಳು ಕಡಿಮೆ, ಇತರೆ ಪಾರಂಪರಿಕ ಅರಣ್ಯ ವಾಸಿಗಳ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ತಿಳಿಸಿದರು.

ADVERTISEMENT

ಅರಣ್ಯ ಹಕ್ಕುಪತ್ರ ಸಿಗದವರು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಆದಿವಾಸಿ ಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ನೆರವನ್ನು ಸರ್ಕಾರ ನೀಡುತ್ತದೆ. ವೈದ್ಯ ಶಿಕ್ಷಣಕ್ಕೆ ವರ್ಷಕ್ಕೆ ₹ 4 ಲಕ್ಷದವರೆಗೂ, ಎಂಜಿನಿಯರಿಂಗ್‌ ಓದುವವರಿಗೆ ₹ 2 ಲಕ್ಷದವರೆಗೂ ಶುಲ್ಕ ಭರಿಸಲಿದೆ. ವಿದೇಶದಲ್ಲಿ ಶಿಕ್ಷಣ ಮಾಡುವವರಿಗೆ ಆರ್ಥಿಕ ನೆರವು ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಸಲಹೆ ನೀಡಿದರು.

ಸಹಕಾರ ಸಂಘಕ್ಕೆ ಉಚಿತ ಸದಸ್ಯತ್ವ: ಯಾವುದೇ ಸಹಕಾರ ಸಂಘಗಳಿಗೆ ಸದಸ್ಯರಾಗುವುದಕ್ಕೆ ಹಣ ಪಾವತಿ ಸುವಂತಿಲ್ಲ. ಅರಣ್ಯದಂಚಿನ ಬುಡಕಟ್ಟು ಜನಾಂಗದ ಅಭಿ ವೃದ್ಧಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೈಯಿಂದ ತಯಾರಿಸಿದ ವಸ್ತುಗಳಿಗೆ ಜಿ.ಎಸ್‌.ಟಿ (ಸರಕು ಮತ್ತು ಸೇವಾ ತೆರಿಗೆ) ವ್ಯಾಪ್ತಿಗೆ ಒಳಪಡಿಸಬಾರದು ಎಂಬ ಮನವಿ ಬಂದಿದೆ ಎಂದು ಹೇಳಿದರು.

21 ಬೃಹತ್‌ ಪ್ರಮಾಣದ ಆದಿವಾಸಿ ವಿವಿಧೋದ್ದೇಶಸಹಕಾರ ಸಂಘಗಳಿಗೆ ಕೇಂದ್ರ ಸರ್ಕಾರದಿಂದ ತಲಾ ₹ 20 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕ ರೇವಣ್ಣಪ್ಪ ತಿಳಿಸಿದರು.

ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕ ಟಿ.ಟಿ. ಬಸವನಗೌಡ, ಸಂಶೋಧನಾಧಿಕಾರಿ ಸಿ.ಮಾದೇಗೌಡ ಹಾಗೂ ಆದಿವಾಸಿ ಸಮುದಾಯಗಳ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.