ಮೈಸೂರು: ಚಾಮುಂಡಿ ಬೆಟ್ಟದಲ್ಲಿನ ಬಹು ದಿನದ ಬೇಡಿಕೆಯಾಗಿದ್ದ ಶಿವಾರ್ಚಕರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಟಿ.ದೇವೇಗೌಡ ಶುಕ್ರವಾರ ಚಾಲನೆ ನೀಡಿದರು.
‘ಸಮುದಾಯ ಭವನದ ನಿರ್ಮಾಣ ವೆಚ್ಚ ₹ 40 ಲಕ್ಷ. ಮೊದಲ ಹಂತದಲ್ಲಿ ₹ 12 ಲಕ್ಷ ಅನುದಾನವನ್ನು ನೀಡಿರುವೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಳಿದ ಮೊತ್ತವನ್ನು ಶಾಸಕರ ನಿಧಿಯಿಂದ ಕೊಡುವೆ’ ಎಂದು ಶಾಸಕ ಜಿ.ಟಿ.ದೇವೇಗೌಡ ಇದೇ ಸಂದರ್ಭ ತಿಳಿಸಿದರು.
ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಚಾಮುಂಡಿ ಬೆಟ್ಟದಲ್ಲಿರುವ ನಾಯಕರ ಬೀದಿಗೆ ಭೇಟಿ ನೀಡಿದ ಶಾಸಕರು, ‘ಆರು ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ರಸ್ತೆ ಹಾಳಾಗಿದೆ. ಈ ರಸ್ತೆಯ ಮರು ನಿರ್ಮಾಣಕ್ಕೆ ₹ 50 ಲಕ್ಷ ಅನುದಾನ ನೀಡುವೆ’ ಎಂಬ ಭರವಸೆ ನೀಡಿದರು. ರಸ್ತೆಯ ಅಭಿವೃದ್ಧಿಗೆ ಅಂದಾಜು ಪ್ರಸ್ತಾವ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಾದೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಯೋಗ ಶ್ರೀನಿವಾಸ್, ಮುಖಂಡರಾದ ಶ್ರೀಧರ್, ಮಂಜು, ಮಣಿಗಾರ್ ನಾಗರಾಜು, ಮಣಿಗಾರ್ ಪ್ರಸಾದ್, ರಮೇಶ್, ಮಂಜುನಾಥ್, ನಾಗೇಂದ್ರ, ಮಹದೇವಸ್ವಾಮಿ, ದಿನೇಶ್ ಮತ್ತಿತರರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.