ADVERTISEMENT

13ರಂದು ರೈತ ಸಂಘದ ರಾಜ್ಯ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 10:10 IST
Last Updated 11 ಫೆಬ್ರುವರಿ 2012, 10:10 IST

ಮೈಸೂರು: ಸದನದಲ್ಲಿ ಅಶ್ಲೀಲ ವೀಡಿಯೊ ವೀಕ್ಷಿಸಿದ ಮಾಜಿ ಸಚಿವರನ್ನು ಶಾಸಕ ಸ್ಥಾನದಿಂದ ಉಚ್ಚಾಟಿಸಬೇಕು. ಶಾಸಕರು ನಡವಳಿಕೆಗಳ ಬಗ್ಗೆ ನೀತಿ ಸಂಹಿತೆ ರೂಪಿಸಬೇಕಾದ ಅಗತ್ಯ ಇದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಪುಟ್ಟಣ್ಣಯ್ಯ ಹೇಳಿದರು.

 ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 13ರಂದು ಬೆಂಗಳೂರಿನ ಶಿಕ್ಷಕರ ಸದನದಲ್ಲಿ ರೈತ ಸಂಘದ ರಾಜ್ಯ ಸಮಿತಿ ಸಭೆ ಕರೆಯಲಾಗಿದೆ. ಅಲ್ಲಿ ವಿಧಾನಸಭೆಯಲ್ಲಿ ಬ್ಲೂ ಫಿಲಂ ವೀಕ್ಷಣೆ ಪ್ರಕರಣ, ಬಿಜೆಪಿ ಸರ್ಕಾರದ ದುರಾಡಳಿ ಇತ್ಯಾದಿಗಳ ಕುರಿತು ಹಾಗೂ ರೈತ ಸಂಘದ ಮುಂದಿನ ನಡೆಯ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.

 ರಾಜಕೀಯದಲ್ಲಿ ನೈತಿಕತೆ ಮಾಯ ವಾಗಿದೆ. ನೀತಿ ರೂಪಿಸು ವವರೇ ನಿಯಮ ಉಲ್ಲಂಘಿಸಿ ನಡೆದುಕೊಳ್ಳುತ್ತಿರುವುದು ವಿಪರ್ಯಾಸ. ರಾಜಕಾರಣಗಳಿಗೆ ನೀತಿಪಾಠದ ಕೋರ್ಸ್ ಆರಂಭಿಸುವ ಅಗತ್ಯ ಇದೆ. ಅತ್ತ ವಿಧಾನಸಭೆಯಲ್ಲಿ ಗಹನ ವಿಚಾರಗಳ ಚರ್ಚೆ ನಡೆಯುತ್ತಿದ್ದರೆ, ಇತ್ತ ಸಚಿವರಾದವರು ಅಶ್ಲೀಲ ಚಿತ್ರ ವೀಕ್ಷಣೆಯಲ್ಲಿ ತೊಡಗಿದ್ದು ಹೇಯ ಕೃತ್ಯ. ಈ ಜನಪ್ರತಿನಿಧಿಗಳಿಗೆ ಯಾರ ಭಯವೂ ಇಲ್ಲ ಎಂದು ದೂರಿದರು.

 ಮರಳು ದಂಧೆಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೆ.ಆರ್.ಪೇಟೆ ಶಾಸಕ ಚಂದ್ರಶೇಖರ್ ರೈತ ಸಂಘದವರನ್ನು ಒದೆಯಿರಿ ಎಂದು ಹೇಳಿರುವುದು ಉದ್ಧಟತನದ ವರ್ತನೆ. ಇಲ್ಲಿನ ತಹಶೀಲ್ದಾರ್‌ಗೂ ಬೆದರಿಕೆ ಹಾಕಿದ್ದಾರೆ. ಶಾಸಕರ ಉದ್ಧಟತನದ ವರ್ತನೆ ಖಂಡಿಸಿ ಇದೇ 18ರಂದು ಕೆ.ಆರ್.ಪೇಟೆಯಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ರೈತ ಸಂಘದ ಮಂಡ್ಯ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಮಾತನಾಡಿ, ಕೆ.ಆರ್.ಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಸುಮಾರು ರೂ.260 ಕೋಟಿ ವೆಚ್ಚದಲ್ಲಿ ಮೂರು ನಾಲೆಗಳ ಆಧುನೀಕರಣ ನಡೆಯುತ್ತಿದೆ. ಈ ಕಾಮಗಾರಿಗಳ ಗುಣಮಟ್ಟ ಕಳಪೆಯಾಗಿದೆ ಎಂದು ಪ್ರಶ್ನಿಸಿದವರ ಮೇಲೆ ಶಾಸಕರ ಕಡೆಯವರು ಹಲ್ಲೆ ನಡೆಸಿದ್ದಾರೆ.

ಪ್ರತಿಭಟನಾ ಸಭೆಯಲ್ಲಿ ಈ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
 ರೈತ ಸಂಘದ ಜಿಲ್ಲಾಧ್ಯಕ್ಷ ಹೊಸಕೋಟೆ ಬಸವರಾಜ್ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.