ಮೈಸೂರು: ಬನ್ನೂರು ಹೋಬಳಿಯ ಅಂಕನಹಳ್ಳಿಯಲ್ಲಿ, ವಲಸೆ ಕಾರ್ಮಿಕರ ಮೂವರು ಮಕ್ಕಳು ಮಂಗಳವಾರ ಸಂಜೆ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ರವಿ ನಾಯಕ ಅವರ ಪುತ್ರ ರೋಹಿತ್ (2), ಅಂಬರೀಷ್ ನಾಯಕ ಅವರ ಪುತ್ರಿ ಕಾವೇರಿ (2) ಹಾಗೂ ರಾಮ ನಾಯಕ ಅವರ ಪುತ್ರ ಸಂಜಯ್ (4) ಮೃತಪಟ್ಟ ಮಕ್ಕಳು.
ಬಳ್ಳಾರಿ ಜಿಲ್ಲೆ ಹೊಸಪೇಟೆಯಿಂದ ಕೆಲಸ ಹುಡುಕಿಕೊಂಡು ಬಂದಿದ್ದ ಇವರು, ಶಿವರಾಜು ಎಂಬುವವರಿಗೆ ಸೇರಿದ ಜಮೀನೊಂದರಲ್ಲಿ ಟೆಂಟ್ ಹಾಕಿಕೊಂಡು ಹಲವು ದಿನಗಳಿಂದ ವಾಸವಿದ್ದರು. ಕಬ್ಬು ಕಡಿಯುವುದು ಸೇರಿದಂತೆ ಇತರೆ ಕೂಲಿ ಕೆಲಸಗಳನ್ನು ಮಾಡುತ್ತಿದ್ದರು.
ಆಟವಾಡುತ್ತಿದ್ದ ಮಕ್ಕಳು, ಟೆಂಟ್ ಹಿಂಭಾಗದಲ್ಲಿ 4ರಿಂದ 5 ಅಡಿಯಷ್ಟು ಆಳವಿದ್ದ ಕೃಷಿ ಹೊಂಡದಲ್ಲಿ ಆಕಸ್ಮಿಕವಾಗಿ ಬಿದ್ದಿವೆ. ಕೂಲಿ ಕೆಲಸದಿಂದ ವಾಪಸ್ಸಾದ ಪೋಷಕರು ಮಕ್ಕಳು ಕಾಣುತ್ತಿಲ್ಲ ಎಂದು ಹುಡುಕತೊಡಗಿದಾಗ, ಸಂಜೆ ನಾಲ್ಕೂವರೆ ವೇಳೆಗೆ ಮಕ್ಕಳ ದೇಹಗಳು ಹೊಂಡದಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಮೃತದೇಹಗಳನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ; ಬೇರೆಯಾದ ರುಂಡ, ಮುಂಡ
ಮೈಸೂರು: ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಜನಸೇವಾ ಐಟಿಐ ಕಾಲೇಜಿನ ಪ್ರಾಂಶುಪಾಲ ವೇಣುಗೋಪಾಲ (55) ಮಂಗಳವಾರ ಮೃತಪಟ್ಟಿದ್ದಾರೆ. ಇವರ ರುಂಡ ಮತ್ತು ಮುಂಡ ಲಾರಿ ಚಕ್ರಗಳಿಗೆ ಸಿಲುಕಿ ಬೇರೆಯಾಗಿವೆ.
ವಿದ್ಯಾರಣ್ಯಾಪುರಂ ನಿವಾಸಿಯಾದ ಇವರು ರಮಾಬಾಯಿನಗರದ ಕಡೆಯಿಂದ ಶ್ರೀರಾಂಪುರದ ಕಡೆಗೆ ರಿಂಗ್ ರಸ್ತೆಯಲ್ಲಿ ಹೋಗುವಾಗ ಹಿಂದಿನಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಇವರ ಮೇಲೆ ಲಾರಿಯ ಚಕ್ರಗಳು ಹರಿದಿವೆ. ಲಾರಿಯು ಸಾಕಷ್ಟು ದೂರಕ್ಕೆ ಇವರ ದೇಹವನ್ನು ಎಳೆದೊಯ್ದಿದೆ.
ಈ ಲಾರಿಗೆ ಹಿಂದಿನಿಂದ ಬಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದು ಅದರ ಮುಂಭಾಗ ಜಖಂಗೊಂಡಿದೆ. ಕೆ.ಆರ್.ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಐಪಿಎಲ್ ಬೆಟ್ಟಿಂಗ್–ಹದ್ದಿನ ಕಣ್ಣು
ಮೈಸೂರು: ನಗರ ಪೊಲೀಸರು ಐಪಿಎಲ್ ಬೆಟ್ಟಿಂಗ್ ಮೇಲೆ ಹದ್ದಿನ ಕಣ್ಣಟ್ಟಿದ್ದು, ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದಾರೆ.
ಮಫ್ತಿನಲ್ಲಿ ಪೊಲೀಸರು ನಗರದಲ್ಲಿ ಓಡಾಡುತ್ತಿದ್ದು, ಸಂಶಯಾಸ್ಪದ ಸ್ಥಳಗಳ ಮೇಲೆ ವಿಶೇಷ ನಿಗಾ ವಹಿಸಿದ್ದಾರೆ. ಇದಕ್ಕಾಗಿಯೇ ತಂಡವೊಂದನ್ನು ರಚಿಸಲಾಗಿದೆ. ಹಳೆಯ ಆರೋಪಿಗಳ ಚಲನವಲನಗಳ ಮೇಲೂ ಗಮನ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.