ADVERTISEMENT

31ನೇ ದಿನಕ್ಕೆ ಆದಿವಾಸಿಗಳ ಧರಣಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2018, 6:14 IST
Last Updated 27 ಫೆಬ್ರುವರಿ 2018, 6:14 IST

ಹುಣಸೂರು: ನಾಗರಹೊಳೆ ಅರಣ್ಯದಿಂದ ಪುನರ್ವಸತಿಗೊಂಡ ಗಿರಿಜನರಿಗೆ ಕಲ್ಪಿಸಿದ ಪುನರ್ವಸತಿ ಯೋಜನೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಧರಣಿ ಸೋಮವಾರ 31ನೇ ದಿನಕ್ಕೆ ಕಾಲಿಟ್ಟಿದೆ.

ಆದಿವಾಸಿಗಳು ಸರ್ಕಾರದ ಗಮನ ಸೆಳೆಯಲು ಜನವರಿ 26ರಂದು ನಾಗಾಪುರ ಪುನರ್ವಸತಿ ಕೇಂದ್ರದಲ್ಲಿ ಧರಣಿ ಆರಂಭಿಸಿದ್ದಾರೆ. ಆದರೂ ತಾಲ್ಲೂಕು ಆಡಳಿತ ಮತ್ತು ಅರಣ್ಯ ಇಲಾಖೆ ಗಮನಕ್ಕೆ ತೆಗೆದುಕೊಂಡಿಲ್ಲ ಎಂದು ಆದಿವಾಸಿ ವ್ಯವಸಾಯ ಆಂದೋಲನದ ಸಂಚಾಲಕ ಎಂ.ಬಿ.ಪ್ರಭು ಆರೋಪಿಸಿದ್ದಾರೆ.

ಗಿರಿಜನರಿಗೆ ಕಲ್ಪಿಸಿರುವ ಕಾಲೊನಿಯಲ್ಲಿ ಬದುಕಲಾಗದ ರೀತಿ ಮನೆ ನಿರ್ಮಿಸಲಾಗಿದೆ. ಕುಡಿಯಲು ನೀರು ಇಲ್ಲ. ಮೂಲ ಸವಲತ್ತುಗಳಿಲ್ಲ. ಕೇಂದ್ರ ಸರ್ಕಾರ ಘೋಷಿಸಿದ ಪ್ಯಾಕೇಜ್‌ನಲ್ಲಿ ಪ್ರತಿ ಕುಟುಂಬಕ್ಕೆ 5 ಎಕರೆ ಕೃಷಿ ಭೂಮಿ ಮತ್ತು ಇತರೆ ಸವಲತ್ತು ಎಂದು ಪ್ರಕಟಿಸಿತ್ತು. ಇನ್ನೂ ನೀಡಿಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮೋಸ ಮಾಡಿದ್ದಾರೆ ಎಂದು ಧರಣಿ ನಿರತರು ದೂರಿದ್ದಾರೆ.

ADVERTISEMENT

ಬೇಡಿಕೆಗಳು:

l ಆದಿವಾಸಿಗಳಿಗೆ ಮೀಸಲಿಟ್ಟ 731 ಹೆಕ್ಟೇರ್‌ ಕೃಷಿ ಭೂಮಿ ಗಡಿ ಗುರುತಿಸಬೇಕು

l 5 ಎಕರೆ ಕೃಷಿ ಭೂಮಿ ಪಹಣಿ ನೀಡಬೇಕು

l ಪುನರ್ವಸತಿ ಕೇಂದ್ರದ 6 ಕಾಲೊನಿಗಳ ಫಲಾನುಭವಿಗಳಿಗೆ ನೀಡಿರುವ 5 ಎಕರೆ ಭೂಮಿ ಆಕಾರ ಬಂದ್‌ ರಚಿಸಿ ನೀಡಬೇಕು

l ಕುಡಿಯುವ ನೀರಿನ ಘಟಕ ನಿರ್ಮಿಸಬೇಕು

l ಲ್ಯಾಂಪ್‌ ಸಹಕಾರ ಸಂಘಕ್ಕೆ ನಾಗಾಪುರದ 134 ಜನರ ಸದಸ್ಯತ್ವ ಮಾನ್ಯ ಮಾಡಬೇಕು

l ಆದಿವಾಸಿ ಮಕ್ಕಳಿಗೆ ಗುಣಮಟ್ಟದ ಪ್ರಾಥಮಿಕ ಶಿಕ್ಷಣ ನೀಡಬೇಕು

l ಅಂಗನವಾಡಿ ಕಟ್ಟಡ ನಿರ್ಮಿಸಬೇಕು

l ನಾಗಾಪುರ 5 ಬ್ಲಾಕುಗಳನ್ನು ಒಂದೇ ಪಂಚಾಯಿತಿಗೆ ಸೇರಿಸಿ ಕಂದಾಯ ಗ್ರಾಮವನ್ನಾಗಿ ರಚಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.