ಮೈಸೂರು: ನಾಲ್ವರು ಕಳ್ಳತನದ ಆರೋಪಿಗಳನ್ನು ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದು, ಇವರಿಂದ ₹14.10 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿ ಕೊಂಡಿದ್ದಾರೆ.
‘ಹುಣಸೂರಿನ ಮಹಮ್ಮದ್ ಸಿರಾಜ್ (28), ಬೆಂಗಳೂರಿನ ಅರ್ಬಾಜ್ ಖಾನ್ (28), ಜಿಬ್ರಾನ್ ಖಾನ್ (19), ಇಮ್ರಾನ್ ಖಾನ್ (21) ಬಂಧಿತರು. ಇವರಲ್ಲಿ ಮಹಮ್ಮದ್ ಸಿರಾಜ್ ವಿರುದ್ಧ ಬೆಂಗಳೂರು ಮತ್ತು ಮೈಸೂರಿನಲ್ಲಿ 50ಕ್ಕೂ ಹೆಚ್ಚು ದರೋಡೆ, ಸುಲಿಗೆ ಪ್ರಕರಣಗಳು ದಾಖಲಾಗಿವೆ’ ಎಂದು ಡಿಸಿಪಿ ಗೀತಾ ಪ್ರಸನ್ನ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಗರದಲ್ಲಿ 6 ಸರಗಳ್ಳತನ ಮತ್ತು 7 ದ್ವಿಚಕ್ರ ವಾಹನಗಳನ್ನು ಕಳವು ಮಾಡಿದ್ದಾರೆ. ಸೆ.21ರಂದು ಕೃಷ್ಣರಾಜ ಪೊಲೀಸರು ಚಾಮುಂಡಿ ಬೆಟ್ಟದಲ್ಲಿ ಗಸ್ತಿನಲ್ಲಿದ್ದಾಗ ಇವರು ಅನುಮಾನಾಸ್ಪದವಾಗಿ ನಿಂತಿದ್ದು, ಪೊಲೀಸರನ್ನು ಕಂಡಾಗ ಪರಾರಿ ಯಾಗಲು ಯತ್ನಿಸಿದರು. ಈ ವೇಳೆ ಹಿಡಿದ ಪೊಲೀಸರು ವಿಚಾರಣೆ ನಡೆಸಿದಾಗ ಪ್ರಕರಣಗಳು ಬೆಳಕಿಗೆ ಬಂದವು ಎಂದು ತಿಳಿಸಿದರು.
ಆರೋಪಿಗಳು ಕೃಷ್ಣರಾಜ ಠಾಣಾ ವ್ಯಾಪ್ತಿಯಲ್ಲಿ 4, ವಿದ್ಯಾರಣ್ಯಪುರಂ ಮತ್ತು ಕುವೆಂಪುನಗರದಲ್ಲಿ ತಲಾ ಒಂದು ಸರಗಳ್ಳತನಗಳನ್ನು ಮಾಡಿದ್ದರೆ, ಕೆ.ಆರ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 4, ಬೆಂಗಳೂರಿನ ಉಪ್ಪಾರಪೇಟೆ, ಪೀಣ್ಯ, ಹಾಗೂ ಮಹಾಲಕ್ಷ್ಮೀ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದೊಂದು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಾಚರಣೆ ತಂಡದಲ್ಲಿ ಇನ್ಸ್ಪೆಕ್ಟರ್ ಎಲ್.ಶ್ರೀನಿವಾಸ್, ಎಸ್ಐ ಸಿ.ಎನ್.ಸುನಿಲ್, ಸಿಬ್ಬಂದಿಯಾದ ಸುರೇಶ್, ಮೊಖದ್ದರ್ ಷರೀಫ್, ಪಿ.ಗಂಗಾಧರ್, ಎಂ.ಶ್ರೀನಿವಾಸ್ ಪ್ರಸಾದ್, ಎಸ್.ಸತೀಶ್ ಕುಮಾರ್, ಅಭಿಷೇಕ್ ಬೆಂಜುವಿನ್, ಎಂ.ಮಧು, ಶರತ್ ಕುಮಾರ್, ಎನ್.ರಾಗಿಣಿ, ಲೋಲಾಕ್ಷಿ, ಮಂಜುನಾಥ್, ಗುರುದೇವ ಆರಾಧ್ಯ, ಕುಮಾರ್, ಶ್ಯಾಮ್ ಇದ್ದರು.
ಮೋಟಾರ್ ಕಳ್ಳತನದ ಆರೋಪಿ ಬಂಧನ
ಮನೆಯ ಮುಂದೆ ನೀರಿನ ಸಂಪಿಗೆ ಅಳವಡಿಸಿದ್ದ ಮೋಟಾರ್ಗಳನ್ನು ಕಳವು ಮಾಡುತ್ತಿದ್ದ ಶಾಂತಿನಗರದ ನಿವಾಸಿ ಮೊಹಮ್ಮದ್ ಸಲೀಂ (29) ಎಂಬಾತನನ್ನು ಆಲನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈತನಿಂದ ₹50 ಸಾವಿರ ಮೌಲ್ಯದ 11 ಮೋಟಾರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.