ADVERTISEMENT

461 ಮಂದಿ ಗುಣಮುಖ: 12 ಸಾವು

455 ಜನರಿಗೆ ಕೋವಿಡ್ ದೃಢ: 7 ಸಾವಿರ ದಾಟಿದ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2020, 16:37 IST
Last Updated 9 ಆಗಸ್ಟ್ 2020, 16:37 IST

ಮೈಸೂರು: ಜಿಲ್ಲೆಯ ವ್ಯಾಪ್ತಿಯಲ್ಲಿ ಭಾನುವಾರ ಕೋವಿಡ್‌ನಿಂದ ಗುಣಮುಖರಾದವರು, ಸೋಂಕಿತರಾದವರ ಸಂಖ್ಯೆಯಲ್ಲಿ ಸ್ವಲ್ಪವೇ ವ್ಯತ್ಯಾಸವಿದೆ. ಪೀಡಿತರಿಗಿಂತ ಗುಣಮುಖರ ಸಂಖ್ಯೆಯೇ ತುಸು ಹೆಚ್ಚಿದೆ.

461 ಜನರು ಸೋಂಕಿನಿಂದ ಗುಣಮುಖರಾದರೆ, ಹೊಸದಾಗಿ 455 ಮಂದಿ ಪೀಡಿತರಾಗಿದ್ದಾರೆ. ಸೋಂಕಿತರ ಸಂಖ್ಯೆ ಏಳು ಸಾವಿರದ ಗಡಿ ದಾಟಿದರೆ, ಗುಣಮುಖರಾದವರ ಸಂಖ್ಯೆ 3 ಸಾವಿರದ ಗಡಿ ದಾಟಿದೆ.

ಜಿಲ್ಲಾಡಳಿತ ಭಾನುವಾರ 12 ಜನರ ಸಾವನ್ನು ದೃಢಪಡಿಸಿದೆ. ಇವರೆಲ್ಲರೂ ಬೇರೆ ಬೇರೆ ದಿನ ಮೃತಪಟ್ಟವರು. 8 ಜನರು ಪುರುಷರಿದ್ದರೆ, ನಾಲ್ವರು ಮಹಿಳೆಯರು. ಎಲ್ಲರೂ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದವರೇ. ಜೊತೆಗೆ ವಿವಿಧ ಅನಾರೋಗ್ಯಕ್ಕೀಡಾಗಿದ್ದವರು ಎಂಬುದನ್ನು ಆರೋಗ್ಯ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಕೋವಿಡ್‌ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ದಿನವೇ ಇಬ್ಬರು ಮೃತಪಟ್ಟಿದ್ದಾರೆ. ದಾಖಲಾದ ಮರು ದಿನ ಮೂವರು ಅಸುನೀಗಿದ್ದಾರೆ. ಉಳಿದವರು 3, 4, 6, 8, 10, 13 ದಿನ ಚಿಕಿತ್ಸೆ ಪಡೆದರೂ, ಸ್ಪಂದಿಸದೆ ನಿಧನರಾಗಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಮೃತರ ಸಂಖ್ಯೆ 235ಕ್ಕೆ ತಲುಪಿದೆ.

ಭಾನುವಾರ ಮೃತಪಟ್ಟ 12 ಜನರಲ್ಲಿ ಒಬ್ಬರು 33 ವರ್ಷದವರು. 50–55 ವಯೋಮಾನದವರು ಆರು ಜನರಿದ್ದಾರೆ. ಮೂವರು 65 ವರ್ಷದವರಾಗಿದ್ದರೆ, ಇನ್ನುಳಿದ ಇಬ್ಬರು 76, 74 ವರ್ಷದವರು.

ಸೋಮವಾರ ಸೋಂಕಿತರಾದ 455 ಜನರಲ್ಲಿ 253 ಮಂದಿ ಪೀಡಿತರ ಸಂಪರ್ಕಿತರು. ಶೀತ ಜ್ವರದ (ಐಎಲ್‌ಐ) ಲಕ್ಷಣಗಳಿಂದ 56 ಜನರು ಬಳಲುತ್ತಿದ್ದಾರೆ. ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದ ಹಾಗೂ ಪ್ರವಾಸ ನಡೆಸಿರುವ 135 ಮಂದಿಯಲ್ಲೂ ಸೋಂಕು ಪತ್ತೆಯಾಗಿದೆ. ಪ್ರವಾಸ ಹಿನ್ನೆಲೆ ಹೊಂದಿದವರು ಸೋಂಕಿತರಾಗಿರುವುದು ತುಸು ಹೆಚ್ಚಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. 11 ಜನರಲ್ಲಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಜಿಲ್ಲೆಯಲ್ಲಿ ಕೋವಿಡ್‌ ಪೀಡಿತರ ಸಂಖ್ಯೆ 7311ಕ್ಕೆ ಏರಿದ್ದು, 3868 ಜನರು ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದಾರೆ. 242 ಮಂದಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರೆ, 724 ಜನರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಆರೈಕೆಯಲ್ಲಿದ್ದಾರೆ. 67 ಮಂದಿ ಹೆಲ್ತ್‌ ಕೇರ್‌ ಸೆಂಟರ್‌ಗೆ ದಾಖಲಾಗಿದ್ದಾರೆ.

ಮನೆಯಲ್ಲೇ 2555 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ತಮ್ಮ ನಿವಾಸಗಳಲ್ಲೇ ಐಸೋಲೇಷನ್‌ ಆಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. 210 ಮಂದಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದು, 70 ಜನರು ಖಾಸಗಿ ಕೋವಿಡ್ ಕೇರ್ ಸೆಂಟರ್‌ಗೆ ಆರೈಕೆಗಾಗಿ ದಾಖಲಾಗಿದ್ದಾರೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

12 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಜಿಲ್ಲೆಯಲ್ಲಿ 62 ಕಂಟೈನ್‌ಮೆಂಟ್‌ ಜೋನ್ ಘೋಷಿಸಲಾಗಿದೆ.

ಕೋರ್ಟ್‌ ಕಲಾಪ ನಡೆಯಲ್ಲ ಇಂದು

ಮೈಸೂರಿನ ಗ್ರಾಹಕ ನ್ಯಾಯಾಲಯದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ಕೋವಿಡ್–19 ದೃಢಪಟ್ಟಿದೆ. ಈ ನ್ಯಾಯಾಲಯದ ಆವರಣದಲ್ಲಿ ಸೋಮವಾರ ಸ್ಯಾನಿಟೈಸ್‌ ಮಾಡಲಾಗುವುದು. ಆದ್ದರಿಂದ ಸೋಮವಾರ ಯಾವುದೇ ಕಲಾಪ ನಡೆಯಲ್ಲ. ಸೋಮವಾರದ ಎಲ್ಲ ಪ್ರಕರಣಗಳು ಮಂಗಳವಾರ ನಡೆಯಲಿವೆ ಎಂದು ಕೋರ್ಟ್‌ ರಿಜಿಸ್ಟ್ರಾರ್ ತಿಳಿಸಿದ್ದಾರೆ.

ವಕೀಲರು, ಕಕ್ಷಿದಾರರು ಸಹಕರಿಸಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದಕುಮಾರ್ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.