ADVERTISEMENT

5 ಕಲಾ ತಂಡ, 2 ಸ್ತಬ್ಧಚಿತ್ರ

ಗಮನ ಸೆಳೆದ ಮರಗಾಲು ವೇಷಧಾರಿ, ಆನೆಗಾಡಿ ಸ್ತಬ್ಧಚಿತ್ರ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 4:15 IST
Last Updated 27 ಅಕ್ಟೋಬರ್ 2020, 4:15 IST
ಅರಮನೆ ಆವರಣದಲ್ಲಿ ಮರಗಾಲು ವೇಷಧಾರಿಯ ಪ್ರದರ್ಶನ
ಅರಮನೆ ಆವರಣದಲ್ಲಿ ಮರಗಾಲು ವೇಷಧಾರಿಯ ಪ್ರದರ್ಶನ   

ಮೈಸೂರು: ಈ ಬಾರಿ ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದು ಕೇವಲ ಐದು ಕಲಾ ತಂಡಗಳು, ಎರಡು ಸ್ತಬ್ಧಚಿತ್ರಗಳು. ಅರಮನೆ ಆವರಣದಲ್ಲಿ ಮಧ್ಯಾಹ್ನ 3.24ಕ್ಕೆ ಕಲಾ ತಂಡಗಳ ಪ್ರದರ್ಶನ ಆರಂಭವಾಗಿ ಕೇವಲ 20 ನಿಮಿಷಗಳಲ್ಲಿ ಮುಗಿದು ಹೋಯಿತು.

ಮೊದಲಿಗೆ ನಿಶಾನೆ ಆನೆ ವಿಕ್ರಂ ಹಾಗೂ ನೌಫತ್ ಆನೆ ಗೋಪಿ ಮೆರವಣಿಗೆಯಲ್ಲಿ ಮುಂದೆ ಸಾಗಿದವು. ನಂತರ ನಾದಸ್ವರ, ವೀರಗಾಸೆ, ಚೆಂಡೆ ಮೇಳ, ಮರಗಾಲು ವೇಷ, ಚಿಲಿಪಿಲಿ ಗೊಂಬೆ ಕಲಾವಿದರು ಪ್ರದರ್ಶನ ನೀಡುತ್ತಾ ರಂಜಿಸಿದರು.

ಮರಗಾಲು ವೇಷಧಾರಿಗಳಾದ ಸಿದ್ದರಾಜು ಮತ್ತು ತಂಡದವರು ಕೊರೊನಾ ವೈರಸ್‌ ಹಿಮ್ಮೆಟ್ಟಿಸುವ ದುರ್ಗೆಯ ರೂಪವನ್ನು ಪ್ರದರ್ಶಿಸಿದರು. ಶ್ರೀನಿವಾಸ ರಾವ್ ಹಾಗೂ ಅವರ ತಂಡ ಪ್ರಸ್ತುತ ಪಡಿಸಿದ ಚೆಂಡೆ ಮೇಳ ಸೊಗಸಾಗಿತ್ತು. ಟಿ.ಕೆ.ರಾಜಶೇಖರ್‌ ಮತ್ತು ತಂಡದವರು ಚಿಲಿಪಿಲಿ ಗೊಂಬೆ ಪ್ರದರ್ಶನ ನೀಡಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ವತಿಯಿಂದ ನಿರ್ಮಿಸಿದ್ದ ಕೊರೊನಾ ವಾರಿಯರ್‌ ಸ್ತಬ್ಧಚಿತ್ರ ಮೆರವಣಿಗೆ ವಿಶೇಷ ಆಕರ್ಷಣೆ ಎನಿಸಿತು. ಹಾಗೆಯೇ, ಕರ್ನಾಟಕ ಪೊಲೀಸ್‌ ಬ್ಯಾಂಡ್‌ ವತಿಯ ಆನೆ ಬಂಡಿ ಸ್ತಬ್ಧಚಿತ್ರ ಕೂಡ ಸೊಗಸಾಗಿತ್ತು. ಇದು ಜಂಬೂಸವಾರಿಯ ಇತಿಹಾಸವನ್ನು ಮರುಕಳಿಸಿತು.

ಬಳಿಕ ಅಶ್ವಾರೋಹಿ ಪಡೆಯ ಪ್ರಧಾನ ಕಮಾಂಡೆಂಟ್ ಕೆಎಆರ್‌ಪಿ ಮೌಂಟೆಂಡ್ ಕಂಪನಿ ತುಕಡಿ ಶಿಸ್ತುಬದ್ಧವಾಗಿ ಸಾಗಿತು. ಅಂಬಾರಿ ಹೊತ್ತ ಅಭಿಮನ್ಯುವಿಗೆ ಕುಮ್ಕಿ ಆನೆಗಳಾದ ವಿಜಯಾ, ಕಾವೇರಿ ಆನೆಗಳು ಸಾಥ್ ನೀಡಿದವು. ಅಂಬಾರಿ ಹಿಂದೆ ಅಶ್ವಾರೋಹಿ ಪಡೆ, ಫಿರಂಗಿ ಗಾಡಿಗಳು, ಅರಣ್ಯ ಇಲಾಖೆ ವೈದ್ಯರ ತಂಡ, ಅಗ್ನಿಶಾಮಕ ತಂಡ ಹಾಗೂ ತುರ್ತುಚಿಕಿತ್ಸಾ ವಾಹನ ಸಾಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.