ADVERTISEMENT

₹ 18 ಸಾವಿರ ಮಾಸಿಕ ವೇತನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2018, 6:11 IST
Last Updated 18 ಜನವರಿ 2018, 6:11 IST
₹ 18 ಸಾವಿರ ಮಾಸಿಕ ವೇತನಕ್ಕೆ ಒತ್ತಾಯ
₹ 18 ಸಾವಿರ ಮಾಸಿಕ ವೇತನಕ್ಕೆ ಒತ್ತಾಯ   

ಮೈಸೂರು: ಆಶಾ, ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆ ಯರನ್ನು ಕಾರ್ಮಿಕರೆಂದು ಪರಿಗಣಿಸಿ, ತಿಂಗಳಿಗೆ ಕನಿಷ್ಠ ₹ 18 ಸಾವಿರ ವೇತನ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಆಲ್‌ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (ಎಐಯು ಟಿಯುಸಿ) ಹಾಗೂ ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್‌ ಕಾಂಗ್ರೆಸ್‌ (ಎಐಟಿಯುಸಿ) ನೇತೃತ್ವದಲ್ಲಿ ಬುಧವಾರ ಪ್ರತ್ಯೇಕ ಪ್ರತಿಭಟನೆ ನಡೆದವು.

ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಸಂಯುಕ್ತ ಅಂಗನವಾಡಿ ನೌಕರರ ಸಂಘ ಹಾಗೂ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಸದಸ್ಯರು ಎಐಯುಟಿಯುಸಿ ನೇತೃತ್ವದಲ್ಲಿ ಕೋಟೆ ಆಂಜನೇಯಸ್ವಾಮಿ ದೇಗುಲದ ಎದುರು ಜಮಾಯಿಸಿದರು. ಅಲ್ಲಿಂದ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿ ತಲುಪಿದರು.

ರಾಜ್ಯ ಅಂಗನವಾಡಿ ಕಾರ್ಯಕರ್ತೆ ಯರ ಮತ್ತು ಸಹಾಯಕಿಯರ ಫೆಡರೇಷನ್‌ ಸದಸ್ಯರು ಎಐಟಿಯುಸಿ ನೇತೃತ್ವದಲ್ಲಿ ರಾಮಸ್ವಾಮಿ ವೃತ್ತದಲ್ಲಿ ಜಮಾಯಿದರು. ನಂತರ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಅಸಂಘಟಿತ ಮತ್ತು ಸ್ಕೀಮ್‌ ವರ್ಕರ್ಸ್‌ ದೇಶವ್ಯಾಪಿ ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದರು.

ADVERTISEMENT

ಸರ್ಕಾರದಿಂದ ಶೋಷಣೆ: 40 ವರ್ಷಗಳಿಂದ ಅಂಗನವಾಡಿ ಸಿಬ್ಬಂದಿ, 20 ವರ್ಷಗಳಿಂದ ಬಿಸಿಯೂಟ ಕಾರ್ಯಕರ್ತೆಯರು ಹಾಗೂ ಒಂದು ದಶಕದಿಂದ ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ.

ಆರೋಗ್ಯ, ಶಿಕ್ಷಣ ಹಾಗೂ ಪೌಷ್ಟಿಕ ಆಹಾರ ಒದಗಿಸಿ ಸಾಮಾಜಿಕ ಸಮಸ್ಯೆ ಹೋಗಲಾಡಿಸುವ ಜನಕಲ್ಯಾಣ ಯೋಜನೆಯಲ್ಲಿ ತೊಡಗಿಸಿಕೊಂಡಿ ದ್ದಾರೆ. ಆದರೆ, ಇವರಿಗೆ ಸಾಮಾಜಿಕ ಭದ್ರತೆ ಇಲ್ಲ. ಮಾಸಿಕ ವೇತನ ನೀಡದೇ ಪ್ರೋತ್ಸಾಹ ಧನದ ಹೆಸರಿನಲ್ಲಿ ಸರ್ಕಾರವೇ ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.

ಅಂಗನವಾಡಿ ನೌಕರರಿಗೆ ಮಾಸಿಕ ₹ 3 ಸಾವಿರ, ಬಿಸಿಯೂಟ ಕಾರ್ಯಕರ್ತೆಯರಿಗೆ ₹ 1,100 ಹಾಗೂ ಆಶಾ ಕಾರ್ಯಕರ್ತೆಯರಿಗೆ ಕೆಲಸಕ್ಕೆ ಅನುಗುಣವಾಗಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ. ವೇತನದ ಅನಿಶ್ಚಿತತೆಯಿಂದಾಗಿ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಅನೇಕರ ಬದುಕು ಅತಂತ್ರವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ದಿನಗಳಲ್ಲಿ ಜೀವನ ಸಾಗಿಸುವುದು ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡರು.

ನಿರ್ಲಕ್ಷ್ಯಕ್ಕೆ ಆಕ್ರೋಶ: ಆಶಾ, ಬಿಸಿಯೂಟ ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸುವಂತೆ 2013ರಲ್ಲಿ ನಡೆದ ಭಾರತ ಕಾರ್ಮಿಕ ಸಮ್ಮೇಳನ ಆಗ್ರಹಿ ಸಿತ್ತು. ಸರ್ಕಾರ ನಿಗದಿಮಾಡಿದ ಕನಿಷ್ಠ ವೇತನ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ, ಈವರೆಗೆ ಬೇಡಿಕೆ ಈಡೇರಿಲ್ಲ. ಯುಪಿಎ ಸರ್ಕಾರದಂತೆ ಎನ್‌ಡಿಎ ಸರ್ಕಾರವೂ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.

ಜನಕಲ್ಯಾಣ ಯೋಜನೆಗಳಿಗೆ ಅನು ದಾನ ನೀಡುವುದು ಕಡಿಮೆಯಾಗುತ್ತಿದೆ. ಇಂತಹ ಯೋಜನೆಯಲ್ಲಿ ಕೆಲಸ ಮಾಡುತ್ತಿರುವವರು ಸಂಕಷ್ಟಕ್ಕೆ ಸಿಲುಕಿ ದ್ದಾರೆ. ಕಾರ್ಪೊರೇಟ್‌ ಕಂಪೆನಿಗಳಿಗೆ ಅನುಗುಣವಾದ ನೀತಿಗಳು ಜಾರಿಯಾಗುತ್ತಿವೆ.

ಗೌರವಧನ ಕಡಿಮೆಯಾಗುತ್ತಿದ್ದು, ಅಭದ್ರತೆ ಕಾಡುತ್ತಿದೆ. ನಿವೃತ್ತಿ ಹೊಂದಿದವರಿಗೆ ಕನಿಷ್ಠ ₹ 3 ಸಾವಿರ ಪಿಂಚಣಿಯನ್ನಾದರೂ ನೀಡಬೇಕು ಎಂದು ಒತ್ತಾಯಿಸಿದರು.

ತರಕಾರಿ, ಮೊಟ್ಟೆ ಒದಗಿಸಿ: ಗರ್ಭಿಣಿ ಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಜಾರಿ ಗೊಳಿಸಿದ ಮಾತೃಪೂರ್ಣ ಯೋಜನೆ ಅಂಗನವಾಡಿ ಕಾರ್ಯಕರ್ತೆಯರಿಗೆ ಹೊರೆಯಾಗಿ ಪರಿಣಮಿಸಿದೆ. ಮೊಟ್ಟೆ ಹಾಗೂ ತರಕಾರಿ ಖರೀದಿಗೆ ಹಣ ನೀಡುತ್ತಿದೆ. ಇವುಗಳ ಬೆಲೆಯಲ್ಲಿ ಏರಿಳಿತ ಆಗುವುದರಿಂದ ಸಮಸ್ಯೆ ಎದುರಾಗಿದೆ. ಹೀಗಾಗಿ, ಹಣ ನೀಡುವ ಬದಲು ಸರ್ಕಾರವೇ ನೇರವಾಗಿ ಒದಗಿಸಬೇಕು ಎಂದು ಆಗ್ರಹಿಸಿದರು.
**
ಆಶಾ, ಬಿಸಿಯೂಟ ಕಾರ್ಯ ಕರ್ತೆಯರು ಕೆಲಸದಿಂದ ಹೊರಗುಳಿದು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಸರ್ಕಾರ ಈಗಲಾದರೂ ಕಣ್ತೆರೆದು ನೋಡಬೇಕು
 -ಪಿ.ಎಸ್‌.ಸಂದ್ಯಾ,
 ಮುಖಂಡರು, ಎಐಯುಟಿಯುಸಿ

**
ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕೆಲಸದ ಹೊರೆ ಹೆಚ್ಚಾಗಿದೆ. ಶನಿವಾರ ಅರ್ಧ ದಿನ ಕೆಲಸ ಮಾಡಿದ ಬಳಿಕ ಬೇರೆ ಜವಾಬ್ದಾರಿ ನೀಡಬಾರದು.
ಡಿ.ಜಗನ್ನಾಥ, ಎಐಟಿಯುಸಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.