ಎಚ್.ಡಿ.ಕೋಟೆ: ಕಬಿನಿ ನಾಲೆಯ ಇಬ್ಜಾಲು ಬಳಿಯಿಂದ ಹಂಪಾಪುರ ಹಾಗೂ ಚಾಮುಂಡೇಶ್ವರಿ ಕ್ಷೇತ್ರದ 29 ಕೆರೆಗೆ ಏತನೀರಾವರಿ ಮೂಲಕ ನೀರು ತುಂಬಿಸುವ ಯೋಜನೆಗೆ ₹ 79 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಸಂಸದ ಆರ್.ಧ್ರುವನಾರಾಯಣ ತಿಳಿಸಿದರು. ತಾಲ್ಲೂಕಿನ ಚಕ್ಕೂರು ಗ್ರಾಮದಲ್ಲಿ ಅಂಬೇಡ್ಕರ್ ಸಮುದಾಯ ಭವನದ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಜ.26ರಂದು ಅಧೀಕೃತವಾಗಿ ಸರಗೂರು ತಾಲ್ಲೂಕು ಕಾರ್ಯರೂಪಕ್ಕೆ ಬರಲಿದೆ. ಹಂತ ಹಂತವಾಗಿ ಮಿನಿ ವಿಧಾನಸೌಧ ಸೇರಿದಂತೆ ಸರ್ಕಾರಿ ಕಚೇರಿಗಳ ಕಟ್ಟಡಗಳ ನಿರ್ಮಾಣಕ್ಕೆ ಬೇಕಿರುವ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಪ್ರತಿ ಹೋಬಳಿ ಕೇಂದ್ರದಲ್ಲಿ ತಲಾ ₹ 50 ಲಕ್ಷ ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಅನುದಾನ ಬಿಡು ಗಡೆ ಮಾಡಲಾಗಿದೆ. ಈಗಾಗಲೇ ಹಂಪಾಪುರ, ಅಂತರಸಂತೆಯಲ್ಲಿ ಅಂಬೇಡ್ಕರ್ ಭವನ ಪೂರ್ಣಗೊಂಡಿವೆ ಎಂದು ತಿಳಿಸಿದರು.
ಸರಗೂರು ತಾಲ್ಲೂಕಿನ ಕಸಬಾ ವ್ಯಾಪ್ತಿಗೆ ಬರುವ ಕೆ.ಬೆಳತ್ತೂರು ಗ್ರಾಮವನ್ನು ಹೋಬಳಿ ಕೇಂದ್ರ ಮಾಡುವಂತೆ ಗ್ರಾಮದ ಮುಖಂಡರಾದ ಸಿದ್ದನಾಯಕ, ಪದ್ಮರಾಜು ಇತರರು ನೀಡಿದ ಮನವಿ ಸ್ವೀಕರಿಸಿ, ಸರ್ಕಾರದ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಸರಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮನುಗನಹಳ್ಳಿ ಮಾದಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ.ಲಕ್ಷ್ಮಣ್, ತಾಲ್ಲೂಕು ಪಂಚಾಯಿತಿ ಸದಸ್ಯ ಟಿ.ಅಂಕನಾಯಕ, ಸಿದ್ದರಾಜು, ಶೇಷಗಿರಿ, ವೆಂಕಟಯ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.