ಮೈಸೂರು: ಕರಕುಶಲ ಕಲೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರದರ್ಶನ– ಮಾರಾಟ ಮೇಳ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಬೇಕು ಎಂದು ಸಹಕಾರ ಸಚಿವೆ ಎಂ.ಸಿ.ಮೋಹನಕುಮಾರಿ ಸಲಹೆ ನೀಡಿದರು.
ಶಿವರಾತ್ರಿ ಹಬ್ಬದ ಪ್ರಯುಕ್ತ ಹೆಬ್ಬಾಳು ಹೊರವರ್ತುಲ ರಸ್ತೆಯಲ್ಲಿರುವ ಜೆಎಸ್ಎಸ್ ಅರ್ಬನ್ ಹಾತ್ನಲ್ಲಿ ಹಮ್ಮಿಕೊಂಡಿರುವ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕ್ರಿಯಾಶೀಲತೆ ಇರುವ ಯುವಕ, ಯುವತಿಯರು ಹೊಸ ಹೊಸ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದು ಸಂತಸದ ವಿಷಯ. ಅರ್ಬನ್ ಹಾತ್ ವಸ್ತುಪ್ರದರ್ಶನವನ್ನು ಪ್ರಥಮ ಬಾರಿ ದೆಹಲಿಯಲ್ಲಿ ನೋಡಿದ್ದೆ. ಅದು ಬಿಟ್ಟರೆ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ನೋಡುತ್ತಿದ್ದೇನೆ. ಇಲ್ಲಿ ಗೃಹೋಪಯೋಗಿ ವಸ್ತುಗಳ ಜೊತೆಗೆ ಮನರಂಜನೆ ನೀಡುವ ಸಾಂಸ್ಕೃತಿಕ ಕಾರ್ಯಕ್ರಮ, ತಿಂಡಿ, ತಿನಿಸುಗಳಿರುವುದು ವಿಶೇಷವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಜೆಎಸ್ಎಸ್ ಅರ್ಬನ್ ಹಾತ್ನಲ್ಲಿ ಬಡವರು, ಸ್ವಂತ ಉದ್ದಿಮೆ ಹೊಂದಿದವರು ಮಳಿಗೆಗಳನ್ನು ತೆರೆದಿದ್ದಾರೆ. ಹೊರಗೆ ಸಿಗುವ ವಸ್ತುಗಳಿಗೆ ಹೋಲಿಸಿದರೆ ಇಲ್ಲಿ ಉತ್ತಮ ಗುಣಮಟ್ಟದ ಹಾಗೂ ಕಡಿಮೆ ಬೆಲೆಯಲ್ಲಿ ಪದಾರ್ಥಗಳು ದೊರೆಯುತ್ತವೆ. ಸುತ್ತೂರು ಮಠವು ಇದಕ್ಕೆ ಅವಕಾಶ ಕಲ್ಪಿಸಿಕೊಟ್ಟಿರುವುದು ಮೆಚ್ಚಿನ ವಿಚಾರ ಎಂದರು.
ಜೆಎಸ್ಎಸ್ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಬಿ.ಆರ್.ಉಮಾಕಾಂತ್, ಸಂಯೋಜನಾಧಿಕಾರಿ ರಾಕೇಶ್ ರಾಯ್ ಭಾಗವಹಿಸಿದ್ದರು. ವಸ್ತುಪ್ರದರ್ಶನದ ಪ್ರವೇಶ ಉಚಿತವಾಗಿದ್ದು, ಫೆ.11ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 9ರ ವರೆಗೆ ತೆರೆದಿರುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.