ಹುಣಸೂರು: ತಾಲ್ಲೂಕಿನ ನಾಗಾಪುರ ಗಿರಿಜನರ ಪುನರ್ವಸತಿ ಕೇಂದ್ರದಲ್ಲಿನ ಮೂಲಸೌಕರ್ಯ ಸಮಸ್ಯೆ ಕುರಿತು ಫೆ.7ರಂದು ಬೆಂಗಳೂರಿಗೆ ನಿಯೋಗ ತೆರಳಿ ಹೆಚ್ಚುವರಿ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಆದಿವಾಸಿ ವ್ಯವಸಾಯ ಸಂಘದ ಸಂಚಾಲಕ ಎಂ.ಬಿ.ಪ್ರಭು ತಿಳಿಸಿದರು.
ಜ.26ರಿಂದ ನಿರಂತರವಾಗಿ ಧರಣಿ ನಡೆಸಲಾಗುತ್ತಿದೆ. ಫೆ.1ರಂದು ಕಾಲ್ನಡಿಗೆ ಮೂಲಕ ಹುಣಸೂರಿಗೆ ತೆರಳಿ ಹುಲಿ ಯೋಜನೆ ನಿರ್ದೇಶಕರ ಕಚೇರಿ ಮುತ್ತಿಗೆ ಹಾಕಿ ಮನವಿ ಸಲ್ಲಿಸಲಾಯಿತು. ಗಿರಿಜನರು ಎದುರಿಸುತ್ತಿರುವ ಸಮಸ್ಯೆ ಹಾಗೂ ಸಾಗುವಳಿ ಪತ್ರ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ಆದರೂ ಯಾವುದೇ ಪ್ರಗತಿ ಕಾಣಲಿಲ್ಲ. ಹೀಗಾಗಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಬೇಕಾಯಿತು ಎಂದು ಹೇಳಿದರು.
ಅರಣ್ಯ ಪಡೆ ಮುಖ್ಯಸ್ಥ ಅಶೋಕ್ ಕುಮಾರ್ ಗರ್ಗ್, ಮುಖ್ಯ ವನ್ಯಜೀವಿ ಪರಿಪಾಲಕ ಪುನಾಟಿ ಶ್ರೀಧರ್, ಅರಣ್ಯ ಭೂ ಧಾಖಲೆಗಳ ವಿಭಾಗದ ಮುಖ್ಯಸ್ಥ ಮಿಲೋ ಟ್ಯಾಗೋ ಅವರನ್ನೂ ಭೇಟಿ ಮಾಡಲಾಯಿತು. ಪುನರ್ವಸತಿ ಕೇಂದ್ರದ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ನೀಡಿರುವ ಪ್ಯಾಕೇಜ್ ಹಾಗೂ ಅರಣ್ಯ ಭೂಮಿಯ ಆದೇಶ ಪ್ರತಿ ನೀಡಿ ವಿವರಿಸಿದ್ದೇವೆ ಎಂದು ಮಾಹಿತಿ ನೀಡಿದರು.
2015ರಲ್ಲಿ ಸರ್ವೆ ನಡೆಸಿದ ಕಂದಾಯ ಇಲಾಖೆ 111.55 ಎಕರೆ ಭೂಮಿ ಕೊರತೆ ವರದಿ ನೀಡಿದೆ. ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ಆದಿವಾಸಿಗಳಿಗೆ ಸರ್ಕಾರ ನೀಡಿದ 15 ನಕಲಿ ಪಹಣಿ ಪ್ರತಿ ನೀಡಲಾಗಿದೆ. ಬಜೆಟ್ ಅಧಿವೇಶನ ಸಮಯದಲ್ಲಿ ವಿಧಾನಸೌಧದ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.