ಮೈಸೂರು: ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ್ದ 7 ಮಂದಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಮುಸ್ತಾಫ (57), ಕುನ್ಹಿರಾಮನ್ (59), ಮಹಮ್ಮದ್ ಶಫಿ (42), ಮಡಿಕೇರಿಯ ಅಬ್ದುಲ್ ಹಕೀಂ (44), ಗುರುಚರಣ್ (34), ಕಾರ್ತಿಕ್ (29) ಹಾಗೂ ಇಲ್ಲಿನ ಬನ್ನಿಮಂಟಪದ ನಿವಾಸಿ ಸಮೀವುಲ್ಲಾ (47) ಬಂಧಿತರು ಎಂದು ಡಿಸಿಪಿ ಗೀತಾ ಪ್ರಸನ್ನ ತಿಳಿಸಿದರು.
ಬಂಧಿತರು ಎನ್.ಆರ್. ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಂದ ₹ 2.50 ಲಕ್ಷ ಪಡೆದು ಹಾಗೂ ಮಂಡಿ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರಿಂದ ₹ 12.50 ಲಕ್ಷ ಪಡೆದು ವಂಚಿಸಿದ್ದರು.
ಆರ್ಬಿಐ ಡೀಲರ್ ಎಂದು ಪರಿಚಯ!
ಆರೋಪಿಗಳು ತಾವುಗಳು ಆರ್ಬಿಐ ಡೀಲರ್ ಆಗಿದ್ದು, ಬ್ಯಾಂಕುಗಳಿಂದ ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಆಮಿಷ ಒಡ್ಡುತ್ತಿದ್ದರು. ಅಸಲಿ ಚಿನ್ನದ ಬಿಸ್ಕತ್ ನೀಡಿ ನಂಬಿಸುತ್ತಿದ್ದರು. ನಂತರ, ಹಣ ಪಡೆದು ಚಿನ್ನ ತರುವುದಾಗಿ ಹೇಳಿ ಬ್ಯಾಂಕನ್ನು ಪ್ರವೇಶಿಸುತ್ತಿದ್ದರು. ಬ್ಯಾಂಕಿನ ಮತ್ತೊಂದು ಬಾಗಿಲ ಮೂಲಕ ಪರಾರಿಯಾಗುತ್ತಿದ್ದರು. ಇದೇ ರೀತಿ ನವೆಂಬರ್ ತಿಂಗಳಿನಲ್ಲಿ ಎನ್.ಆರ್.ಠಾಣೆ ಹಾಗೂ 15 ದಿನಗಳ ಹಿಂದೆಯಷ್ಟೇ ಮಂಡಿ ಠಾಣಾ ವ್ಯಾಪ್ತಿಯಲ್ಲಿ ವಂಚಿಸಿದ್ದರು ಎಂದು ಅವರು ತಿಳಿಸಿದರು.
ಬಂಧಿತರಿಂದ ₹15 ಲಕ್ಷ ನಗದು, ಕೃತ್ಯಕ್ಕೆ ಬಳಸಿದ 2 ಚಿನ್ನದ ಬಿಸ್ಕತ್ಗಳು, 2 ಕಾರು, 1 ದ್ವಿಚಕ್ರ ವಾಹನ ಹಾಗೂ 5 ಮೊಬೈಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿಸಿಪಿ ಗೀತಾ ಪ್ರಸನ್ನ ಹಾಗೂ ಎನ್.ಆರ್.ವಿಭಾಗದ ಎಸಿಪಿ ಶಿವಶಂಕರ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಇನ್ಸ್ಪೆಕ್ಟರ್ ಗಳಾದ ಅರುಣ್, ಅಜರುದ್ದೀನ್, ಎಎಸ್ಐ ಪಾಪಣ್ಣ, ಸಿಬ್ಬಂದಿಯಾದ ಮಂಜುನಾಥ್, ಪ್ರಸನ್ನ, ಮಹೇಶ್, ದೊಡ್ಡೇಗೌಡ, ರಮೇಶ್, ಸುನಿಲ್ಕುಮಾರ್, ಈರೇಶ್, ಸುರೇಶ್, ಪರಶುರಾಮ, ಮಂಜು, ಕುಮಾರ, ಶ್ಯಾಂ ಸುಂದರ್ ಕಾರ್ಯಾಚರಣೆ ತಂಡ ದಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.