ಮೈಸೂರು: ಪಟಾಕಿ ಸಿಡಿತದಿಂದ ಗಾಯಗೊಂಡವರಿಗೆ ತ್ವರಿತ ಚಿಕಿತ್ಸೆ ನೀಡಲು ಕೆ.ಆರ್.ಆಸ್ಪತ್ರೆಯಲ್ಲಿ 80 ಹಾಸಿಗೆಗಳನ್ನು ಮೀಸಲಿರಿಸಲಾಗಿದೆ.
ಕಣ್ಣಿನ ವಿಭಾಗದಲ್ಲಿ 60 ಮತ್ತು ಸುಟ್ಟಗಾಯಗಳ ವಿಭಾಗದಲ್ಲಿ 20 ಹಾಸಿಗೆಗಳಿದ್ದು, ಪಟಾಕಿಯಿಂದ ಗಾಯಗೊಂಡು ಬರುವವರನ್ನು ಇಲ್ಲಿ ತಕ್ಷಣ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.
‘ಎರಡೂ ವಿಭಾಗಗಳ ತಜ್ಞ ವೈದ್ಯರು ದಿನದ 24 ಗಂಟೆಗಳ ಕಾಲವೂ ಇಲ್ಲಿ ಲಭ್ಯವಿದ್ದು, ಬಂದವರಿಗೆ ತ್ವರಿತ ಚಿಕಿತ್ಸೆ ನೀಡಲಿದ್ದಾರೆ. ಸಾರ್ವಜನಿಕರು ಗಾಯಗಳಾದಾಗ ಆತಂಕಪಡದೇ ತಕ್ಷಣವೇ ಆಸ್ಪತ್ರೆಗೆ ಬರಬೇಕು’ ಎಂದು ಆಸ್ಪತ್ರೆ ಮತ್ತು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಡೀನ್ ಡಾ.ಸಿ.ಪಿ.ನಂಜ ರಾಜ್ ಮನವಿ ಮಾಡಿದ್ದಾರೆ.
‘ಪಟಾಕಿ ಹೊಡೆಯುವಾಗ ಆದಷ್ಟು ಜಾಗರೂಕರಾಗಿಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸಬಾರದು. ಮಕ್ಕಳಿಗೆ ಪಟಾಕಿ ಸಿಡಿಸಲು ಅವಕಾಶ ಕೊಡದಿರುವುದೇ ಉತ್ತಮ’ ಎಂದು ಅವರು ಸಲಹೆ ನೀಡಿದ್ದಾರೆ.
ಕಳೆದ ವರ್ಷ 5 ಮಂದಿ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.