ADVERTISEMENT

ಬಿಸಿಯೂಟ ಸೇವನೆಗೆ ‘ಖಾತ್ರಿ’ ನೆರಳು

ಜಿಲ್ಲಾ ಪಂಚಾಯಿತಿಯಿಂದ ಸರ್ಕಾರಿ ಶಾಲೆಗಳ ಆವರಣದಲ್ಲಿ ನಿರ್ಮಾಣ

ಎಂ.ಮಹೇಶ್
Published 7 ಜೂನ್ 2025, 7:57 IST
Last Updated 7 ಜೂನ್ 2025, 7:57 IST
ಪಿರಿಯಾಪಟ್ಟಣ ತಾಲ್ಲೂಕು ಪಂಚಾಯಿತಿ ಕಂಪಲಾಪುರ ಸರ್ಕಾರಿ ಶಾಲೆ ಆವರಣದಲ್ಲಿ ಭೋಜನಾಲಯ ನಿರ್ಮಿಸಲಾಗಿದೆ
ಪಿರಿಯಾಪಟ್ಟಣ ತಾಲ್ಲೂಕು ಪಂಚಾಯಿತಿ ಕಂಪಲಾಪುರ ಸರ್ಕಾರಿ ಶಾಲೆ ಆವರಣದಲ್ಲಿ ಭೋಜನಾಲಯ ನಿರ್ಮಿಸಲಾಗಿದೆ   

ಮೈಸೂರು: ಸರ್ಕಾರಿ ಶಾಲೆಗಳ ಮಕ್ಕಳಿಗೆ ಸರ್ಕಾರದಿಂದ ‘ಅಕ್ಷರ ದಾಸೋಹ’ ಯೋಜನೆಯಡಿ ನೀಡಲಾಗುವ ಮಧ್ಯಾಹ್ನದ ಬಿಸಿಯೂಟ ಸೇವನೆಗೆ ಅನುವಾಗುವಂತೆ ಭೋಜನಾಲಯಗಳ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ಕ್ರಮ ಕೈಗೊಂಡಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮ–ನರೇಗಾ) ಯೋಜನೆಯಡಿ ಸೂರು ನಿರ್ಮಿಸಿಕೊಡಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಬಡವರು, ಶ್ರಮಿಕರು, ಮಧ್ಯಮ ವರ್ಗದವರು ಹಾಗೂ ರೈತರ ಮಕ್ಕಳೇ ಜಾಸ್ತಿ ಪ್ರಮಾಣದಲ್ಲಿ ಬರುತ್ತಾರೆ. ಆ ಎಲ್ಲ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಮಧ್ಯಾಹ್ನದ ವೇಳೆ ಬಿಸಿಯಾದ ಊಟ ನೀಡಲಾಗುತ್ತಿದೆ. ಊಟ ಮಾಡುವ ಜಾಗವೂ ಸ್ವಚ್ಛವಾಗಿರಬೇಕು, ಅದಕ್ಕೊಂದು ಸೂರು ಕಲ್ಪಿಸಬೇಕು ಎಂಬ ಉದ್ದೇಶದಿಂದ ಭೋಜನಾಲಯಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಉದ್ಯೋಗ ಖಾತ್ರಿಯಲ್ಲಿ ಅನುದಾನ ಲಭ್ಯವಿರುವ ಅವಕಾಶವನ್ನು ಬಳಸಿಕೊಳ್ಳಲಾಗುತ್ತಿದೆ.

ಈವರೆಗೆ ಅಡುಗೆ ಕೋಣೆಗಳನ್ನು ಪ್ರತ್ಯೇಕವಾಗಿ ನಿರ್ಮಿಸಲಾಗುತ್ತಿತ್ತು. ಈಗ, ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಜಿಲ್ಲಾ  ಪಂಚಾಯಿತಿ ಅಧಿಕಾರಿಗಳು ಅಲ್ಲಲ್ಲಿ ಪ್ರತ್ಯೇಕವಾಗಿ ಭೋಜನಾಲಯಗಳನ್ನೂ ಕಟ್ಟಿಸಿಕೊಡುವುದಕ್ಕೆ ಕ್ರಮ ಕೈಗೊಂಡಿದ್ದಾರೆ.

ADVERTISEMENT

ಇದರಿಂದ ಮಕ್ಕಳು ಸುರಕ್ಷಿತವಾಗಿ ಕುಳಿತು ಊಟ ಮಾಡುವುದಕ್ಕೆ ವ್ಯವಸ್ಥೆ ಕಲ್ಪಿಸಬಹುದು. ಅಲ್ಲದೇ, ಶಾಲೆಯ ಹೊರಾವರಣದಲ್ಲಿ, ಮರವಿದ್ದರೆ ಅದರ ಕೆಳಗೆ ಕುಳಿತು ಊಟ ಮಾಡುವುದು ಭೋಜನಾಲಯಗಳು ನಿರ್ಮಾಣವಾಗಿರುವ ಶಾಲೆಗಳಲ್ಲಿ ತಪ್ಪಿದೆ. ಹಂತ ಹಂತವಾಗಿ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಕಟ್ಟಿಸಿಕೊಡಲು ಜಿಲ್ಲಾ ಪಂಚಾಯಿತಿ ಯೋಜಿಸಿದೆ ಎನ್ನುತ್ತಾರೆ ಅಧಿಕಾರಿಗಳು.

ಸ್ಥಳೀಯವಾಗಿ ಕೆಲಸ

ಇಂತಿಷ್ಟು ಮಾನವ ದಿನಗಳನ್ನು ಸೃಜಿಸಿ, ಸ್ಥಳೀಯವಾಗಿ ಉದ್ಯೋಗ ಚೀಟಿ ಪಡೆದವರನ್ನು ಕೂಲಿ ಕೆಲಸಕ್ಕೆ ಬಳಸಿಕೊಂಡು ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ. ಇದಕ್ಕಾಗಿ ಆಯಾ ಗ್ರಾಮ ಪಂಚಾಯಿತಿಗಳ ಮೂಲಕ ಕ್ರಿಯಾಯೋಜನೆ ಸಿದ್ಧಪಡಿಸಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಪರಿಣಾಮ, ಕೂಲಿಕಾರರಿಗೆ ಅವರ ಊರಿನಲ್ಲೇ ಕೆಲಸ ಕೊಟ್ಟಂತಾಗುತ್ತಿದೆ ಹಾಗೂ ಸಾರ್ವಜನಿಕ ಆಸ್ತಿ ಸೃಜನೆಯ ಕಾರ್ಯವೂ ಆಗುತ್ತಿದೆ. ಕೆಲವೆಡೆ ಅಡುಗೆ ಕೋಣೆಯೊಂದಿಗೇ ಭೋಜನಾಲಯವನ್ನೂ ನಿರ್ಮಿಸಲಾಗುತ್ತಿದೆ.

‘ಭೋಜನಾಲಯ’ಗಳ ನಿರ್ಮಾಣದಿಂದಾಗಿ ಮಕ್ಕಳು ನೆರಳಿರುವ ಜಾಗ ಹುಡುಕಿಕೊಂಡು ಹೋಗುವುದು, ಕಾರಿಡಾರ್‌ನಲ್ಲೋ, ತರಗತಿ ಕೋಣೆಯಲ್ಲೋ ಕುಳಿತು ಊಟ ಮಾಡುವುದು ತಪ್ಪುತ್ತದೆ. ಶೌಚಾಲಯ, ಕಾಂ‍ಪೌಂಡ್, ಆಟದ ಮೈದಾನ, ಮಳೆ ನೀರು ಸಂಗ್ರಹ ಘಟಕ ಮೊದಲಾದವುಗಳ ನಿರ್ಮಾಣದೊಂದಿಗೆ ಡೈನಿಂಗ್ ಹಾಲ್‌, ಅಡುಗೆ ಕೋಣೆಗಳ ಕಾಮಗಾರಿಗಳನ್ನೂ ಜೋಡಿಸಿಕೊಂಡು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ, ಮಕ್ಕಳಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಭೋಜನಾಲಯಗಳನ್ನು ಪ್ರಾಯೋಗಿಕ ಚಟುವಟಿಕೆ ಹಾಗೂ ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲೂ ಅವಕಾಶವಿದೆ ಎನ್ನುತ್ತಾರೆ ಶಿಕ್ಷಕರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಉದ್ಯೋಗ ಖಾತ್ರಿ ಯೋಜನೆ ಬಳಸಿಕೊಳ್ಳಲಾಗುತ್ತಿದ್ದು ಭೋಜನಾಲಯ ನಿರ್ಮಾಣವೂ ಅದರ ಭಾಗವಾಗಿದೆ. ಮಕ್ಕಳಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಸ್.ಯುಕೇಶ್ ಕುಮಾರ್ ಸಿಇಒ ಜಿಲ್ಲಾ ಪಂಚಾಯಿತಿ ಮೈಸೂರು

ಎಲ್ಲೆಲ್ಲಿ ನಿರ್ಮಾಣ?

ಈವರೆಗೆ ಜಿಲ್ಲೆಯಾದ್ಯಂತ 32 ಶಾಲೆಗಳಲ್ಲಿ ಅಡುಗೆ ಕೋಣೆ ಭೋಜನಾಲಯ ನಿರ್ಮಾಣದ ಯೋಜನೆ ಕೈಗೊಳ್ಳಲಾಗಿದೆ. ಇದರಲ್ಲಿ ಮಾಗುಡಿಲು ಗಾವಡಗೆರೆ ವಡ್ಡಂಬಾಳು ಹಾರೋಹಳ್ಳಿ (ಹುಸೇನ್‌ಪುರ ಗ್ರಾ.ಪಂ.) ಕಣಗಾಲು ಹುಂಡಿಮಾಳ ಹೊಸಕೋಟೆ ಉದ್ಬೂರು ಚಿಕ್ಕಮಳಲಿ ಆಸ್ವಾಳು ಬಾಡಗ ಕಂಪಲಾಪುರ ಉಯ್ಯಂಬಳ್ಳಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದಕ್ಕಾಗಿ ₹ 84.49 ಲಕ್ಷ ವೆಚ್ಚವಾಗಲಿದೆ ಎಂದು ಅಂದಾಜಿಸಲಾತ್ತು. ಈ ಪೈಕಿ ₹ 67.10 ಲಕ್ಷ ವೆಚ್ಚವಾಗಿದ್ದು 3473 ಮಾನವ ದಿನಗಳನ್ನು ಸೃಜಿಸಲಾಗಿದೆ. ನಂಜನಾಯ್ಕನಹಳ್ಳಿ ಪಾಳ್ಯ ಸಿದ್ದಯ್ಯನ‍ಪುರ ನಂಜಯ್ಯನ ಕಾಲೊನಿ ತಟ್ಟೆಕೆರೆ ನಿಲವಾಗಿಲು ಯಾಚೇಗೌಡನಹಳ್ಳಿ ಡಿ.ಜಿ. ಕೊಪ್ಪಲು ಕೆ.ಜಿ. ಕೊಪ್ಪಲು (ಬೆಟ್ಟದತುಂಗ ಗ್ರಾಮ ಪಂಚಾಯಿತಿ) ಚನ್ನಕಲ್ಲುಕಾವಲ್ ಲಕ್ಷ್ಮೀಪುರ ದೊಡ್ಡಬೇಲಾಳು ಕೊರ್ಲಹೊಸಳ್ಳಿ ಬೆಮ್ಮತ್ತಿ ಅತ್ತಿಗೋಡು (ಹಿರಿಯ ಪ್ರಾಥಮಿಕ ಶಾಲೆ ಪ್ರೌಢಶಾಲೆ) ಹಿಟ್ನೆಹೆಬ್ಬಾಗಿಲು ಕಿತ್ತೂರು ಅಂಕಹಳ್ಳಿ ಕೊಪ್ಪಲು ಹೊಸಕೆಂಪಯ್ಯನಹುಂಡಿ ವಾಟಾಳು ಹಾಗೂ ಕುರುಬೂರು ಗ್ರಾಮದ ಶಾಲೆಗಳಲ್ಲಿ ನಿರ್ಮಾಣ ಹಂತದಲ್ಲಿದೆ. ಇದಕ್ಕಾಗಿ ₹ 1.75 ಕೋಟಿ ಅಂದಾಜು ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಈವರೆಗೆ ₹ 33.62 ಲಕ್ಷ ವೆಚ್ಚವಾಗಿದೆ. 3249 ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ತಿಳಿಸಿದೆ.

ಪ್ರಸಕ್ತ ಸಾಲಿನಲ್ಲಿ 2025–26ನೇ ಸಾಲಿನಲ್ಲಿ ಎಚ್‌.ಡಿ. ಕೋಟೆ ಹುಣಸೂರು ಸಾಲಿಗ್ರಾಮ ಹಾಗೂ ಪಿರಿಯಾಪಟ್ಟಣ ತಾಲ್ಲೂಕುಗಳ ವಿವಿಧ ಆರು ಶಾಲೆಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಕೆಲವೆಡೆ ಫ್ಲೋರ್‌ಗೆ ವೆಟ್ರಿಫೈಡ್‌ ಟೈಲ್ಸ್‌ ಹಾಕಿದರೆ ಕೆಲವೆಡೆ ರೆಡ್‌ಆಕ್ಸೈಡ್ ಬಳಸಲಾಗುತ್ತಿದೆ. ಖಂಡೇಗೌಡನಪುರ ಬಿಳಿಗೆರೆ ಬಿಳಿಕೆರೆ ಕಾಳಮ್ಮನಕೊಪ್ಪಲು ಹಾಗೂ ಅರಳೀಮರದ ಕೊಪ್ಪಲು ಗ್ರಾಮಗಳ ಸರ್ಕಾರಿ ಶಾಲೆಗಳನ್ನು ನಿರ್ಮಾಣಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.