ಮೈಸೂರು: ‘ಜನಸಂಖ್ಯೆಯ ಹೆಚ್ಚಳ ಮತ್ತು ತಾಂತ್ರಿಕತೆಯ ಬೆಳವಣಿಗೆಯಿಂದ ಪರಿಸರ ಮಾಲಿನ್ಯ ಹೆಚ್ಚುತ್ತಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಪಿ.ದೇವಮಾನೆ ಹೇಳಿದರು.
ನಗರದ ಎಬಿವಿಪಿ ಕಚೇರಿಯಲ್ಲಿ ಗುರುವಾರ ಕಾನೂನು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ‘ಪರಿಸರ ಸಂರಕ್ಷಣೆ ಮತ್ತು ಕಾನೂನು ಜಾರಿ ಸವಾಲುಗಳು' ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಗಾರ ಉದ್ಘಾಟಿಸಿದ ಅವರು ಮಾತನಾಡಿ, ‘ಜನರು ಮತ್ತು ಪರಿಸರದ ನಡುವೆ ಸಮತೋಲನ ಕಾಪಾಡಿಕೊಳ್ಳುವುದು ಇಂದು ಅವಶ್ಯಕವಾಗಿದೆ’ ಎಂದರು.
‘ಜನಸಂಖ್ಯೆ ಮತ್ತು ತಾಂತ್ರಿಕತೆ ಬೆಳೆದಷ್ಟು ಪರಿಸರದ ಮೇಲೆ ಒತ್ತಡ ಉಂಟಾಗುತ್ತಿದೆ. ಬದುಕಲು ಅಗತ್ಯವಾದ ಮೂಲ ಸೌಕರ್ಯಗಳಾದ ಗಾಳಿ, ನೀರು ಮತ್ತು ಆಹಾರಗಳು ನಮಗೆ ಶುದ್ಧವಾಗಿ ದೊರೆಯುವುದು ಪ್ರಕೃತಿಯಿಂದ ಮಾತ್ರ. ಅದನ್ನು ಮಾಲಿನ್ಯ ರಹಿತವಾಗಿ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ’ ಎಂದು ಹೇಳಿದರು.
‘ಈಚಿನ ದಿನಗಳಲ್ಲಿ ಏಕ ವ್ಯಕ್ತಿಯ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆಯುತ್ತಿದೆ. ಅದು ಕೇವಲ ಒಬ್ಬ ವ್ಯಕ್ತಿಯ ಅನುಕೂಲಕ್ಕೆ ಸೀಮಿತವಾಗಿರುತ್ತದೆ. ಆದ್ದರಿಂದ ನೀವು ಅದನ್ನು ಆಳವಾಗಿ ವಿಚಾರಿಸಿ, ನಂತರ ಅದನ್ನು ಒಪ್ಪಿಕೊಳ್ಳಬೇಕೋ? ಬೇಡವೋ? ಎಂಬುದನ್ನು ತಿರ್ಮಾನಿಸಬೇಕು’ ಎಂದು ಸಲಹೆ ನೀಡಿದರು.
ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಶ್ರೀರಾಮ ಅಂಗೀರಸ ಮಾತನಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಕಾನೂನು ವಿಭಾಗ ಮತ್ತು ಕಾನೂನು ಶಾಲೆಯ ಅಧ್ಯಕ್ಷ ಡಾ.ಸಿ.ಬಸವರಾಜು, ಮಹಾನಗರ ಸಹ ಕಾರ್ಯದರ್ಶಿ ಚಿರಂತ್ ಸಿಂಧ್ಯಾ, ಮುಖಂಡರಾದ ಎನ್.ಎಸ್.ಕೀರ್ತಿಕುಮಾರ್, ಬಿ.ಮಧುಗೌಡ, ನಂದನ್, ಮಹದೇವಸ್ವಾಮಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.