ADVERTISEMENT

ಅದಾಲತ್‌ನಲ್ಲಿ ದೂರುಗಳ ಸುರಿಮಳೆ: ಸ್ಪಂದಿಸಿದ ಮೇಯರ್ ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 12:55 IST
Last Updated 31 ಜನವರಿ 2023, 12:55 IST
ಮೈಸೂರು ನಗರಪಾಲಿಕೆ ವಲಯ-4ರಲ್ಲಿ ಪಾಲಿಕೆಯಿಂದ ಮಂಗಳವಾರ ನಡೆದ ಅದಾಲತ್‌ನಲ್ಲಿ ಮೇಯರ್ ಶಿವಕುಮಾರ್ ಮಾತನಾಡಿದರು. ಆರ್.ರವೀಂದ್ರಕುಮಾರ್, ಎಸ್‌ಬಿಎಂ ಮಂಜು, ಭಾಗ್ಯಾ ಮಾದೇಶ್ ಇದ್ದಾರೆ
ಮೈಸೂರು ನಗರಪಾಲಿಕೆ ವಲಯ-4ರಲ್ಲಿ ಪಾಲಿಕೆಯಿಂದ ಮಂಗಳವಾರ ನಡೆದ ಅದಾಲತ್‌ನಲ್ಲಿ ಮೇಯರ್ ಶಿವಕುಮಾರ್ ಮಾತನಾಡಿದರು. ಆರ್.ರವೀಂದ್ರಕುಮಾರ್, ಎಸ್‌ಬಿಎಂ ಮಂಜು, ಭಾಗ್ಯಾ ಮಾದೇಶ್ ಇದ್ದಾರೆ   

ಮೈಸೂರು: ಮೇಯರ್‌ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಅದಾಲತ್‌ನಲ್ಲಿ ಸಾರ್ವಜನಿಕರಿಂದ ದೂರುಗಳ ಸುರಿಮಳೆಯಾಯಿತು.

ನಗರಪಾಲಿಕೆಯಿಂದ ಯಾದವಗಿರಿ ಆಕಾಶವಾಣಿ ವೃತ್ತ ಬಳಿಯ ವಲಯ–4 ಮತ್ತು ಹೆಬ್ಬಾಳು ಬಸವನಗುಡಿ ವೃತ್ತದಲ್ಲಿರುವ ವಲಯ ಕಚೇರಿ–5ರಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ಬೇಡಿಕೆ ಈಡೇರಿಕೆಗಾಗಿ ನಿವಾಸಿಗಳು ಮನವಿ ಸಲ್ಲಿಸಿದರು.

ಕುಡಿಯುವ ನೀರಿನ ಬಿಲ್ ಜಾಸ್ತಿ ಬರುತ್ತಿದ್ದು, ಮೀಟರ್ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡರೂ ಅಧಿಕಾರಿಗಳು ಮುಂದಾಗುತ್ತಿಲ್ಲ. ಮನೆ ಕಂದಾಯ ಕಟ್ಟಿಸಿಕೊಳ್ಳುವಂತೆ ಅರ್ಜಿ ಸಲ್ಲಿಸಿ ಮೂರು ತಿಂಗಳಾದರೂ ಕಟ್ಟಿಸಿಕೊಂಡಿಲ್ಲ. ಕಟ್ಟಡ ಪೂರ್ಣಗೊಂಡ ವರದಿ ಕೊಡುವುದಕ್ಕೆ ಅಲೆದಾಡಿಸುತ್ತಿದ್ದಾರೆ. ಒಳಚರಂಡಿ ಸಮಸ್ಯೆ ನಿವಾರಣೆಗೆ ದೂರು ನೀಡಿದರೂ ಸ್ಪಂದನೆ ದೊರೆತಿಲ್ಲ ಎಂಬಿತ್ಯಾದಿ ದೂರುಗಳು ನಿವಾಸಿಗಳಿಂದ ಬಂದವು. ಇದು, ವಲಯ ಕಚೇರಿಗಳಲ್ಲಿನ ಕಾರ್ಯವೈಖರಿಯನ್ನು ತೆರೆದಿಟ್ಟಿತು.

ADVERTISEMENT

ಕೂಡಲೇ ಸರಿಪಡಿಸಿ: ಯಾದವಗಿರಿಯಿಂದ ಬಂಬೂಬಜಾರ್‌ಗೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಒಳಚರಂಡಿ ಪೈಪ್‌ಲೈನ್‌ ಒಡೆದು ಸಮಸ್ಯೆಗಳಾಗುತ್ತಿವೆ. ಹೊಸ ಪೈಪ್‌ಲೈನ್ ಹಾಕುವಂತೆ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ. ವಿದ್ಯುತ್ ದೀಪಗಳು ಬೆಳಗದೇ ತೊಂದರೆಯಾಗುತ್ತಿದ್ದು, ಕೂಡಲೇ ಸರಿಪಡಿಸಬೇಕು ಎಂದು ನಿವಾಸಿಗಳು ಕೋರಿದರು.

ಇದಕ್ಕೆ ಸ್ಪಂದಿಸಿದ ಮೇಯರ್‌, ‘ಕೂಡಲೇ ವಿದ್ಯುತ್‌ ದೀಪ ಅಳವಡಿಸಬೇಕು. ಯಜಿಡಿಗೆ ಸಂಬಂಧಿಸಿದ ದೂರುಗಳನ್ನು ತಕ್ಷಣ ಬಗೆಹರಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಿವೃತ್ತ ನೌಕರ ರಾಮಮೂರ್ತಿ ಮಾತನಾಡಿ, ‘ನಮ್ಮ ಮನೆಯಲ್ಲಿ ನಾಲ್ವರಿದ್ದೇವೆ. ಕುಡಿಯುವ ನೀರಿನ ಬಿಲ್ ₹ 500 ಬರುತ್ತಿದೆ. ಪರಿಶೀಲಿಸಿ ಹೊಸ ಮೀಟರ್ ಅಳವಡಿಸುವಂತೆ ಅರ್ಜಿ ಕೊಟ್ಟರೂ ಕ್ರಮ ಕೈಗೊಂಡಿಲ್ಲ’ ಎಂದು ತಿಳಿಸಿದರು.

‘ಸಂಬಂಧಿಸಿದವರು ಅವರ ಮನೆಗೆ ತೆರಳಿ ಮೀಟರ್‌ನಲ್ಲಿ ತಾಂತ್ರಿಕ ದೋಷವಿದ್ದರೆ ತ್ವರಿತವಾಗಿ ಸರಿಪಡಿಸಬೇಕು. ಕಳೆದ ವರ್ಷ ಎಷ್ಟು ಬಿಲ್ ಇತ್ತು ಮತ್ತು ಈಗ ಎಷ್ಟು ಹೆಚ್ಚಾಗಿದೆ ಎಂಬುದನ್ನು ಗಮನಿಸಿ ಕ್ರಮ ಕೈಗೊಳ್ಳಬೇಕು’ ಎಂದು ಸೂಚಿಸಿದರು.

ನಿವಾಸಿಗಳ ಅಹವಾಲು ಆಲಿಸಿದ ಮೇಯರ್‌ ಹಾಗೂ ಅಧಿಕಾರಿಗಳು ಸ್ಥಳದಲ್ಲೇ ಹಲವಾರು ಅರ್ಜಿಗಳನ್ನು ಇತ್ಯರ್ಥಪಡಿಸಿದರು.

ಅರ್ಜಿ ಸ್ವೀಕಾರ: ಅರ್ಜಿಗಳನ್ನು ಪರಿಶೀಲಿಸಿ ತ್ವರಿತವಾಗಿ ಇತ್ಯರ್ಥಪಡಿಸಲು ಗಮನಹರಿಸಬೇಕು. ಸಿಆರ್‌ಗೆ ಅರ್ಜಿ ಸಲ್ಲಿಸಿರುವ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು ಎಂದು ಹೇಳಿದರು.

ವಲಯ–4ರಲ್ಲಿ ಹೆಚ್ಚಿನ ಜನರು ಸೇರಿದ್ದರು. ಹೀಗಾಗಿ, ಮಧ್ಯಾಹ್ನಕ್ಕೆ ಕೊನೆಯಾಗಬೇಕಿದ್ದ ಅದಾಲತ್‌ ಅನ್ನು ಸಂಜೆ 5ರವರೆಗೆ ನಡೆಸಲಾಯಿತು. ಜನರಿಂದ ಅರ್ಜಿ ಸ್ವೀಕರಿಸಲಾಯಿತು.

‘ವಲಯ ಕಚೇರಿಗಳಲ್ಲಿ ಸಾರ್ವಜನಿಕರ ಅರ್ಜಿಗಳಿಗೆ ಪರಿಹಾರ ಸಿಗುತ್ತಿಲ್ಲ ಅಥವಾ ವಿಳಂಬವಾಗುತ್ತಿದೆ. ಹೀಗಾಗಿ, ಜನರು ಮುಖ್ಯ ಕಚೇರಿಗೆ ಬರುತ್ತಿದ್ದಾರೆ. ವಲಯ ಕಚೇರಿಗಳಲ್ಲಿ ಅರ್ಜಿಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು. ಸಿಬ್ಬಂದಿ ವಿರುದ್ಧ ದೂರು ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು’ ಎಂದು ಮೇಯರ್ ಶಿವಕುಮಾರ್ ಎಚ್ಚರಿಕೆ ನೀಡಿದರು.

ಉಪ ಮೇಯರ್ ಡಾ.ಜಿ.ರೂಪಾ ಯೋಗೇಶ್, ಸದಸ್ಯರಾದ ಆರ್.ರವೀಂದ್ರಕುಮಾರ್, ಎಸ್‌ಬಿಎಂ ಮಂಜು, ಭಾಗ್ಯಾ ಮಾದೇಶ್, ಎಂ.ಯು.ಸುಬ್ಬಯ್ಯ, ಪೈಲ್ವಾನ್ ಶ್ರೀನಿವಾಸ್, ಲಕ್ಷ್ಮಿ ಶಿವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.