ADVERTISEMENT

ಗಮನಸೆಳೆದ ಚಿತ್ರಕಲಾ ಪ್ರದರ್ಶನ

ಕುಂಚದಲ್ಲಿ ಮೂಡಿಬಂದಿರುವ ಮೈಸೂರಿನ ತಾಣಗಳು

​ಪ್ರಜಾವಾಣಿ ವಾರ್ತೆ
Published 20 ಮೇ 2019, 20:17 IST
Last Updated 20 ಮೇ 2019, 20:17 IST
ಕಲಾಕೃತಿಗಳನ್ನು ಪ್ರೊ.ಪಿ.ವಿ.ನಂಜರಾಜ್ ಅರಸು ವೀಕ್ಷಿಸಿದರು. ಹಾ.ಪು.ರಂಗಸ್ವಾಮಿ, ಮಜ್ಜಿಗೆಪುರ ಕೆ.ಶಿವರಾಮು, ಕಳಲೆ ಜವರನಾಯಕ ಇದ್ದಾರೆ
ಕಲಾಕೃತಿಗಳನ್ನು ಪ್ರೊ.ಪಿ.ವಿ.ನಂಜರಾಜ್ ಅರಸು ವೀಕ್ಷಿಸಿದರು. ಹಾ.ಪು.ರಂಗಸ್ವಾಮಿ, ಮಜ್ಜಿಗೆಪುರ ಕೆ.ಶಿವರಾಮು, ಕಳಲೆ ಜವರನಾಯಕ ಇದ್ದಾರೆ   

ಮೈಸೂರು: ಪ್ರಕೃತಿಯ ಸೊಬಗು, ಗ್ರಾಮೀಣ ಬದುಕಿನ ಸೊಗಡು, ಪಕ್ಷಿಗಳ ಕಲರವ, ಮಳೆಗಾಲದ ಆಹ್ಲಾದಕರ ವಾತಾವರಣ, ತಬೂಬಿಯಾ ಹೂಗಳ ಚೆಲುವಿನ ಚಿತ್ತಾರ...

ಇಂಥ ಹತ್ತಾರು ಭಾವ ಸ್ಫುರಿಸುವ ಕಲಾಕೃತಿಗಳು ವೀಕ್ಷಣೆಗೆ ಸಿಕ್ಕಿದ್ದು ಗೋಕುಲಂ 3ನೇ ಹಂತದಲ್ಲಿರುವ ಸಾಲಿಟೇರ್ ಆರ್ಟ್ ಗ್ಯಾಲರಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ.

ಜಲವರ್ಣ ಕಲಾವಿದ ಹಾ.ಪು.ರಂಗಸ್ವಾಮಿ ಅವರು ಚಿತ್ರಿಸಿದ 54 ಜಲವರ್ಣ ಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಪ್ರೊ.ಪಿ.ವಿ.ನಂಜರಾಜ ಅರಸು ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ ನೀಡಿದರು.

ADVERTISEMENT

ಮೈಸೂರು, ಕೊಡಗು ಜಿಲ್ಲೆಗಳ ಪಾರಂಪರಿಕ ತಾಣಗಳು, ಪ್ರಾಕೃತಿಕ ಸಿರಿತನವನ್ನು ಕಲಾವಿದ ತಮ್ಮ ಕುಂಚದಲ್ಲಿ ಸೆರೆ ಹಿಡಿದಿದ್ದಾರೆ. ಚಾಮುಂಡಿಬೆಟ್ಟ, ಡಾ.ರಾಜಕುಮಾರ್ ಉದ್ಯಾನ, ಮಾನಸಗಂಗೋತ್ರಿಯಲ್ಲಿರುವ ಬೃಹತ್‌ ಅರಳಿ ಮರ, ಜಯಚಾಮರಾಜೇಂದ್ರ ವೃತ್ತ, ಇರ್ವಿನ್ ರಸ್ತೆ, ನಗರ ಬಸ್ ನಿಲ್ದಾಣ, ವಿಧಾನಸೌಧ, ಶ್ರೀರಂಗಪಟ್ಟಣದ ಬೇಸಿಗೆ ಅರಮನೆ, ಸುಂಟಿಕೊಪ್ಪ ಮತ್ತು ಸೋಮವಾರಪೇಟೆಯ ಮಳೆಗಾಲದ ಚಿತ್ರಣ ಸೇರಿದಂತೆ ಹಲವಾರು ಚಿತ್ರಗಳು ಗಮನ ಸೆಳೆಯುತ್ತವೆ. ಮೇ 31ರ ವರೆಗೂ ಚಿತ್ರಕಲಾ ಪ್ರದರ್ಶನ ವೀಕ್ಷಕರಿಗೆ ತೆರೆದಿರುತ್ತದೆ.

ಕಲಾವಿದ ಹಾ.ಪು.ರಂಗಸ್ವಾಮಿ ಮಾತನಾಡಿ, ‘ಜಲವರ್ಣ ಮಾಧ್ಯಮದಲ್ಲಿ ಸುತ್ತಮುತ್ತಲಿನ ಪರಿಸರ, ಜನಜೀವನ ಪ್ರತಿಬಿಂಬಿತ ಚಿತ್ರಣಗಳನ್ನು ಯಥಾವತ್ತಾಗಿ ಚಿತ್ರಿಸಿದ್ದೇನೆ. ಪ್ರಸಿದ್ಧ ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಸಹಸ್ರಾರು ಪ್ರಕೃತಿಯ ಚಿತ್ರ ಕಲಾಕೃತಿಗಳನ್ನು ಕುಂಚದಿಂದ ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದೇನೆ. ಹಲವಾರು ಆರ್ಟ್ ಗ್ಯಾಲರಿಗಳಲ್ಲಿ ನನ್ನ ಚಿತ್ರಗಳು ಪ್ರದರ್ಶನಗೊಂಡಿವೆ’ ಎಂದರು.

ಸಾಹಿತಿಗಳಾದ ಮಜ್ಜಿಗೆಪುರ ಕೆ.ಶಿವರಾಮು, ಕಳಲೆ ಜವರನಾಯಕ ಮತ್ತು ಕರ್ನಾಟಕ ರಾಜ್ಯ ಎಸ್‌ಸಿ ಮೋರ್ಚಾ ಉಪಾಧ್ಯಕ್ಷ ಚಿಕ್ಕರಂಗ ನಾಯಕ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.