ADVERTISEMENT

ವಿಜೃಂಭಣೆಯ ಗ್ರಾಮೀಣ ದಸರಾ

ಬೆಟ್ಟದಪುರದ ಪ್ರಮುಖ ಬೀದಿಗಳಲ್ಲಿ ಚಾಮುಂಡೇಶ್ವರಿ ದೇವಿ ಮೂರ್ತಿಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 19:21 IST
Last Updated 15 ಅಕ್ಟೋಬರ್ 2018, 19:21 IST
ಬೆಟ್ಟದಪುರದಲ್ಲಿ ಚಾಮುಂಡಿ ಪ್ರತಿಮೆಗೆ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಹಾಗೂ ಕೆ.ಮಹದೇವ್ ಪುಷ್ಪಾರ್ಚನೆ ಮಾಡುವ ಮೂಲಕ ಗ್ರಾಮೀಣ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು
ಬೆಟ್ಟದಪುರದಲ್ಲಿ ಚಾಮುಂಡಿ ಪ್ರತಿಮೆಗೆ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ ಹಾಗೂ ಕೆ.ಮಹದೇವ್ ಪುಷ್ಪಾರ್ಚನೆ ಮಾಡುವ ಮೂಲಕ ಗ್ರಾಮೀಣ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು   

ಬೆಟ್ಟದಪುರ: ಬೆಟ್ಟದಪುರ ಗ್ರಾಮದಲ್ಲಿ ಗ್ರಾಮೀಣ ದಸರಾವನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಶಿಡ್ಲುಮಲ್ಲಿಕಾರ್ಜುನ ಸ್ವಾಮಿ ಹಾಗೂ ಪವಾಡ ಬಸವೇಶ್ವರ ದೇವಾಲಯಗಳಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ, ನಾಡದೇವತೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಗೆ ಶಾಸಕ ಕೆ.ಮಹದೇವ್ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಉತ್ಸವ ಮೂರ್ತಿಯನ್ನು ರಥದಲ್ಲಿ ಇಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

ಜನಪದ ಕಲಾ ತಂಡಗಳು, ಗ್ರಾಮೀಣ ಸೊಗಡನ್ನು ಬಿಂಬಿಸುವ ಸಾಂಸ್ಕೃತಿಕ ನೃತ್ಯಗಳು ಮನಸೂರೆ ಗೊಂಡವು. ಚಂಡೆವಾದ್ಯ, ಕೋಲಾಟ, ಡೊಳ್ಳುಕುಣಿತ, ವೀರಗಾಸೆ, ಬೀಸು ಕಂಸಾಳೆ ಮೆರವಣಿಗೆಗೆ ಮೆರುಗು ನೀಡಿದವು.

ADVERTISEMENT

ರೈತರೊಂದಿಗೆ ಶಾಸಕ ಕೆ.ಮಹದೇವ್ ಎತ್ತಿನ ಗಾಡಿಯಲ್ಲಿ ಸಂಚರಿಸಿದರು.

ಸನ್ಯಾಸಿಪುರ ಯುವಕರು ಪ್ರದರ್ಶಿಸಿದ ಬೀಸು ಕಂಸಾಳೆ ನೃತ್ಯ ಗಮನ ಸೆಳೆಯಿತು.

ಕನ್ನಡ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್.ಮಂಜುನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಕುಂಜಪ್ಪ ಕಾರ್ನಾಡ್, ಮಲ್ಲಿಕಾರ್ಜುನ್, ಪ್ರಭಾರ ಉಪ ತಹಶೀಲ್ದಾರ್ ಗೌರೀಶ್, ಪಿಡಿಒ ಚಿದಾನಂದ್, ವಿ.ಎ. ಧನಂಜಯ್, ಶ್ರೀಧರ್, ಗ್ರಾ.ಪಂ ಸದಸ್ಯ ರಾಜಶೇಖರ್, ಅಯ್ಯರ್ ಗಿರಿ, ಮುಖಂಡರಾದ ನಟೇಶ್, ಬಿ.ಜೆ.ದೇವರಾಜು, ರಾಘವೇಂದ್ರ, ಉದಯ್ ಇದ್ದರು.

ಓಕುಳಿಯಾಡಿ ಸಂಭ್ರಮಿಸಿದ ಯುವಕರು:

ಮೆರವಣಿಗೆಯಲ್ಲಿ ನೆರೆದಿದ್ದ ಯುವಜನರು ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಸಂಭ್ರಮಿಸಿದರು. ಡೊಳ್ಳು ಕುಣಿತದ ಸದ್ದಿಗೆ ಕುಣಿದು ಕುಪ್ಪಳಿಸಿದರು. ದಸರಾ ಹಬ್ಬದ ಪ್ರಯುಕ್ತ ಬೆಟ್ಟದಪುರ ಗ್ರಾಮದ ಪ್ರತಿ ಬೀದಿಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಸರ್ಕಾರಿ ಕಚೇರಿಗಳು, ಸಹಕಾರ ಸಂಸ್ಥೆಗಳು, ಕೆ.ಇ.ಬಿ ಹಾಗೂ ರಾಮನಾಥಪುರ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಉತ್ಸವದಲ್ಲಿ ಪಾಲ್ಗೊಂಡಿದ್ದ ಎಲ್ಲರಿಗೂ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.