ಮೈಸೂರು: ಅಯೋಧ್ಯೆ ವಿವಾದದ ಕುರಿತು ಬಿಜೆಪಿ ಮುಖಂಡರು ಸುಪ್ರೀಂ ಕೋರ್ಟ್ಗೆ ನಿರ್ದೇಶನ ನೀಡುವ ಧಾಟಿಯಲ್ಲಿ ಮಾತನಾಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್ ಇಲ್ಲಿ ಶುಕ್ರವಾರ ಹೇಳಿದರು.
‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸುಪ್ರೀಂ ಕೋರ್ಟ್ಗೆ ಎಚ್ಚರಿಕೆ ಕೊಡುವಂತೆ ಹೇಳಿಕೆ ನೀಡಿದ್ದಾರೆ. ಅವರ ಮಾತುಗಳು ಸಂವಿಧಾನಕ್ಕೆ ನೇರ ಸವಾಲಾಗಿವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.
‘ಎನ್ಕೌಂಟರ್ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿ ಸುಪ್ರೀಂ ಕೋರ್ಟ್ಗೆ ಸವಾಲು ಹಾಕುವ ಧೈರ್ಯ ತೋರುತ್ತಿದ್ದಾರೆ. ದೇಶದ ಅತ್ಯುನ್ನತ ನ್ಯಾಯಾಲಯ ಹೀಗೆಯೇ ತೀರ್ಪು ಕೊಡಬೇಕು ಎನ್ನಲು ಯೋಗಿ ಆದಿತ್ಯನಾಥ್ ಯಾರು’ ಎಂದು ಪ್ರಶ್ನಿಸಿದರು.
‘ಸುಪ್ರೀಂ ಕೋರ್ಟ್ ತೀರ್ಪಿಗೆ ಕಾಯದೆ ಕೇಂದ್ರ ಸರ್ಕಾರವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಹೊರಡಿಸಲಿ ಎಂದು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಅವರು ಈ ರೀತಿ ಹೇಳಬಾರದಿತ್ತು. ಅವಕಾಶ ಸಿಕ್ಕಾಗ ಈ ವಿಷಯದ ಬಗ್ಗೆ ಅವರೊಂದಿಗೆ ಮಾತನಾಡುತ್ತೇನೆ’ ಎಂದರು.
ಸುಪ್ರೀಂ ಕೋರ್ಟ್ ಹೀಗೆಯೇ ಮಾಡಬೇಕು ಎನ್ನುವ ಅಧಿಕಾರ ಯಾರಿಗೂ ಇಲ್ಲ. ಕೆಲವರ ಒತ್ತಡಕ್ಕೆ ಮಣಿದು ತೀರ್ಪು ನೀಡಲು ನಮ್ಮ ದೇಶದ ನ್ಯಾಯಾಲಯ ಪಾಕಿಸ್ತಾನ ಅಥವಾ ಬ್ರೆಜಿಲ್ನ ನ್ಯಾಯಾಲಯ ಅಲ್ಲ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.