ADVERTISEMENT

ರೈತರಿಂದ ಎಲೆಕೋಸು ನೇರ ಖರೀದಿ

ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹33 ದರ; ಜಯಪುರ ಭಾಗದ ಬೆಳೆಗಾರರಲ್ಲಿ ಹರ್ಷ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2020, 11:07 IST
Last Updated 30 ಅಕ್ಟೋಬರ್ 2020, 11:07 IST
ಜಯಪುರ ಹೋಬಳಿಯ ಮಂಡನಹಳ್ಳಿಯ ರೈತ ಮಹದೇವ ಅವರ ಜಮೀನಿನಲ್ಲಿ ಕಟಾವಿಗೆ ಬಂದಿರುವ ಎಲೆಕೋಸು ಬೆಳೆ
ಜಯಪುರ ಹೋಬಳಿಯ ಮಂಡನಹಳ್ಳಿಯ ರೈತ ಮಹದೇವ ಅವರ ಜಮೀನಿನಲ್ಲಿ ಕಟಾವಿಗೆ ಬಂದಿರುವ ಎಲೆಕೋಸು ಬೆಳೆ   

ಜಯಪುರ: ಲಾಕ್‌ಡೌನ್‌ ವೇಳೆ ಸಂಕಷ್ಟ ಅನುಭವಿಸಿದ್ದ ತರಕಾರಿ ಬೆಳೆಗಾರರು, ಈಗ ಉತ್ತಮ ಬೆಲೆ ಸಿಗುತ್ತಿರುವುದರಿಂದ ಕೊಂಚ ನಿರಾಳರಾಗಿದ್ದಾರೆ.

ಜಯ‍ಪುರ ಭಾಗದ ರೈತರು ಹೆಚ್ಚಾಗಿ ಎಲೆಕೋಸು ಬೆಳೆದಿದ್ದು, ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹33 ದರ ಇರುವುದರಿಂದ ಖುಷಿಯಾಗಿದ್ದಾರೆ.

ಈರುಳ್ಳಿ ದರ ಹೆಚ್ಚಳವಾಗಿ ರುವುದರಿಂದ ಹೊರ ರಾಜ್ಯದ ವರ್ತಕರು ಎಲೆಕೋಸು ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಹೋಟೆಲ್‌ಗಳಲ್ಲೂ ಈರುಳ್ಳಿ ಬದಲಾಗಿ ಎಲೆಕೋಸನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವುದರಿಂದ ಸಹಜವಾಗಿ ಬೇಡಿಕೆ ಹೆಚ್ಚಾಗಿದೆ.

ADVERTISEMENT

ಮಾರುಕಟ್ಟೆಯಲ್ಲಿ ಎಲೆಕೋಸು ಆವಕ ಕಡಿಮೆ ಆಗಿರುವುದರಿಂದ ಡಿಢೀರನೆ ಬೆಲೆ ಹೆಚ್ಚಳವಾಗಿ ರೈತರಿಗೆ ವರವಾಗಿದೆ.

‘ಜಯಪುರ ಹೋಬಳಿಯಾದ್ಯಂತ 150 ಎಕರೆಗೂ ಅಧಿಕ ಪ್ರದೇಶದಲ್ಲಿ ಎಲೆಕೋಸು ಬೆಳೆಯಲಾಗಿದೆ. ಬೆಲೆ ಹೆಚ್ಚಳ ಆಗಿರುವುದರಿಂದ ರೈತರು ನರ್ಸರಿಗಳಿಂದ ಸಸಿಗಳನ್ನು ಖರೀದಿಸಿ ನಾಟಿ ಮಾಡುತ್ತಿದ್ದಾರೆ’ ಎಂದು ದಾರಿಪುರ ಚಾಮುಂಡೇಶ್ವರಿ ನರ್ಸರಿ ಮಾಲೀಕ ಗುರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಾಕ್‌ಡೌನ್‌ ವೇಳೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತರಕಾರಿ ಬೆಳೆದು ನಷ್ಟ ಅನುಭವಿಸಿದ್ದೆ. ಮತ್ತೆ ಸಾಲ ಮಾಡಿ ಒಂದು ಎಕರೆಯಲ್ಲಿ ಎಲೆಕೋಸು ಬೆಳೆದೆ. ಉತ್ತಮ ದರ ಸಿಕ್ಕಿರುವುದರಿಂದ ವರ್ತಕರೇ ಹೊಲಗಳಿಗೆ ಬಂದು ಎಪಿಎಂಸಿ ನಿಗದಿಪಡಿಸಿದ ದರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಕೃಷಿಗೆ ಖರ್ಚು ಮಾಡಿದ ಆದಾಯ ಸಿಕ್ಕಿರುವುದರಿಂದ ಸಂತೋಷವಾಗಿದೆ’ ಎಂದು ಡಿ.ಸಾಲುಂಡಿ ಗ್ರಾಮದ ರೈತ ಬಸವೇಗೌಡ ತಿಳಿಸಿದರು.

‌‘ಎಲೆಕೋಸಿನ ಆವಕ ಕಡಿಮೆ ಯಾಗಿದ್ದು, ವರ್ತಕರಿಂದ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಕೆ.ಜಿ.ಗೆ ₹33 ದರ ಸಿಕ್ಕಿರುವುದರಿಂದ ರೈತರು ಖುಷಿಪಟ್ಟಿದ್ದಾರೆ. ತರಕಾರಿ ಬೆಲೆ ಪ್ರತಿದಿನ ಏರಿಳಿತ ಆಗುತ್ತಿರುತ್ತದೆ’ ಎಂದು ಮೈಸೂರು ಬಂಡಿಪಾಳ್ಯ ತರಕಾರಿ ಮಾರುಕಟ್ಟೆ ವ್ಯವಸ್ಥಾಪಕ ನಾಗರಾಜು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.