ಮೈಸೂರು: ‘ವಿದ್ಯಾರ್ಥಿಗಳ ಶುಲ್ಕದಿಂದಲೇ ನಡೆಯುತ್ತಿರುವ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾನಿಲಯದ ಆಡಳಿತ ವರ್ಗ; ಕೋವಿಡ್ ಸಂಕಷ್ಟದಲ್ಲೂ ₹ 85 ಲಕ್ಷ ವೆಚ್ಚದಲ್ಲಿ ಮೂರು ಐಷಾರಾಮಿ ಕಾರು ಖರೀದಿಸಿ ದುಂದು ವೆಚ್ಚ ಮಾಡಿದೆ’ ಎಂದು ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಶುಕ್ರವಾರ ಇಲ್ಲಿ ದೂರಿದರು.
‘ವಿಶ್ವವಿದ್ಯಾನಿಲಯದಲ್ಲಿ ಕಾರುಗಳಿದ್ದರೂ ಹೊಸದಾಗಿ ಖರೀದಿಸಿರುವುದು ತುಘಲಕ್ ಆಡಳಿತವಿದ್ದಂತೆ. ಹೀಗಾದರೆ ವಿ.ವಿ.ಯಲ್ಲಿ ನಡೆದಿರುವ ದುಂದುವೆಚ್ಚಕ್ಕೆ ಕಡಿವಾಣ ಹಾಕುವರು ಯಾರು? ಉನ್ನತ ಶಿಕ್ಷಣ ಸಚಿವರು ಇದರಲ್ಲಿ ಶಾಮೀಲಾಗಿದ್ದಾರೆ’ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಆರೋಪಿಸಿದರು.
‘ಈಗಿನ ಕುಲಪತಿ ಎಸ್.ವಿದ್ಯಾಶಂಕರ್ ತಮ್ಮ ಅವಧಿಯಲ್ಲಿನ ಆದಾಯ–ಖರ್ಚಿನ ಬಗ್ಗೆ ಶ್ವೇತಪತ್ರ ಹೊರಡಿಸಬೇಕು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹೆಚ್ಚಳ ಮಾಡಿರುವ ಶುಲ್ಕ ಏರಿಕೆಯನ್ನು ವಾಪಸ್ ಪಡೆಯಬೇಕು. ನಮ್ಮ ಬೇಡಿಕೆ ಈಡೇರದಿದ್ದರೆ ವಿ.ವಿ.ಯ ಮುಂಭಾಗ ಅನಿರ್ದಿಷ್ಟ ಅವಧಿ ಮುಷ್ಕರ ನಡೆಸಲಾಗುವುದು’ ಎಂದು ಶಿವರಾಮು ಎಚ್ಚರಿಕೆ ನೀಡಿದರು.
‘ವಿಶ್ವವಿದ್ಯಾನಿಲಯದಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಹಾಗೂ ಎಸಿಬಿಗೆ ದೂರು ಸಲ್ಲಿಸಲು ಅನುಮತಿ ಕೊಡುವಂತೆ ಮನವಿ ಸಲ್ಲಿಸಲಾಗಿದೆ. ಅನುಮತಿ ಸಿಕ್ಕ ತಕ್ಷಣವೇ ದೂರು ದಾಖಲಿಸಲಾಗುವುದು’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.