ADVERTISEMENT

ಸೊಪ್ಪು ವ್ಯಾಪಾರಿಯನ್ನೂ ಬಿಡದ ಸರಗಳ್ಳರು

ಕುಕ್ಕೆ ಹೊತ್ತು ಬಿಸಿಲಿನಲ್ಲಿ ಮಾರಾಟ ಮಾಡಿದ ಹಣ ಕಳ್ಳರ ಪಾಲು

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 20:02 IST
Last Updated 2 ಜೂನ್ 2019, 20:02 IST

ಮೈಸೂರು: ನಗರದಲ್ಲಿ ಸರಗಳ್ಳರ ಅಟ್ಟಹಾಸ ಮುಂದುವರಿದಿದೆ. ಕುಕ್ಕೆ ಹೊತ್ತು ಬಿಸಿಲಿನಲ್ಲಿ ಸುತ್ತಿ ಸೊಪ್ಪು ವ್ಯಾಪಾರ ಮಾಡಿ ಗಳಿಸಿದ ₹ 1 ಸಾವಿರ ಹಣ ಹಾಗೂ ಕುತ್ತಿಗೆಯಲ್ಲಿದ್ದ 8ರಿಂದ 10 ಗ್ರಾಂನಷ್ಟು ಚಿನ್ನದ ಗುಂಡುಗಳುಳ್ಳ ಕರಿಮಣಿ ಸರವನ್ನು 55 ವರ್ಷದ ಮಹಿಳೆಯೊಬ್ಬರಿಂದ ಕಿತ್ತುಕೊಂಡು ಹೋಗಿದ್ದಾರೆ.

ಬೆಳಿಗ್ಗೆ 10.30ರ ಸಮಯದಲ್ಲಿ ಇಲ್ಲಿನ ಶಿವಾಜಿ ರಸ್ತೆಯ 10ನೇ ಕ್ರಾಸ್‌ನಲ್ಲಿ ಕುಕ್ಕೆಯನ್ನು ತಲೆ ಮೇಲೆ ಹೊತ್ತುಕೊಂಡು ಮಹಿಳೆಯೊಬ್ಬರು ಸೊಪ್ಪು ಮಾರಾಟ ಮಾಡುತ್ತಾ ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ನೀಲಿ ಬಣ್ಣದ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಮಹಿಳೆಯ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಚೀಲ ಹಾಗೂ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಿತ್ತುಕೊಂಡು ಹೋಗಿದ್ದಾನೆ.

‘ಮದುವೆಯಲ್ಲಿ ಕರಿಮಣಿ ಸರಕ್ಕೆ ಚಿನ್ನದ ಗುಂಡುಗಳನ್ನು ಹಾಕಿ ನೀಡಲಾಗಿತ್ತು. ಅಂದಿನಿಂದಲೂ ಜೋಪಾನವಾಗಿ ಎಷ್ಟೇ ಕಷ್ಟ ಬಂದರೂ ಗಿರವಿ ಇಡದೇ ಜತನದಿಂದ ಕಾಪಾಡಿಕೊಂಡಿದ್ದೆ. ಬಿಸಿಲಿನಲ್ಲಿ ಸುತ್ತಿ ಸೊಪ್ಪನ್ನು ಮಾರಾಟ ಮಾಡಿದ ಹಣವನ್ನು ಚೀಲದಲ್ಲಿ ಹಾಕಿದ್ದೆ. ಆದರೆ, ಕಳ್ಳನೊಬ್ಬ ಕ್ಷಣಾರ್ಧದಲ್ಲಿ ಕಿತ್ತುಕೊಂಡು ಹೋಗಿದ್ದಾನೆ’ ಎಂದು ಅವರು ರೋಧಿಸುತ್ತಿದ್ದರು.

ADVERTISEMENT

ಬಂಗಾರದ ಸರವನ್ನು ಕಿತ್ತುಕೊಂಡು ಹೋಗುತ್ತಿದ್ದ ಸರಗಳ್ಳರು ಇದೀಗ ಬಡ ವ್ಯಾಪಾರಸ್ಥರನ್ನೂ ಬಿಡದೇ ಅವರು ಕಷ್ಟಪಟ್ಟು ಗಳಿಸಿದ ಹಣ ಹಾಗೂ ಒಂದಿಷ್ಟು ಒಡವೆಗಳನ್ನು ಕಿತ್ತುಕೊಂಡು ಹೋಗುತ್ತಿರುವುದು ಸಾರ್ವಜನಿಕರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಘಟನೆ ನಡೆಯುತ್ತಿದ್ದಂತೆ ನಿಯಂತ್ರಣ ಕಚೇರಿ 100ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಸರಗಳ್ಳರನ್ನು ಹಿಡಿಯುವುದಕ್ಕೆ ಸಹಕಾರಿಯಾಗುತ್ತದೆ ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಪ್ರಕರಣದ ಎನ್.ಆರ್.ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.