ADVERTISEMENT

ಚಾಮುಂಡಿ ಎಕ್ಸ್‌ಪ್ರೆಸ್‌ ಒಂದು ಗಂಟೆ ವಿಳಂಬ

ವಿದ್ಯುತ್ ತಂತಿ ತುಂಡು: ರೈಲು ಸಂಚಾರ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 13 ಮೇ 2019, 20:26 IST
Last Updated 13 ಮೇ 2019, 20:26 IST
.
.   

ಮೈಸೂರು: ಚನ್ನಪಟ್ಟಣ ತಾಲ್ಲೂಕಿನ ಶೆಟ್ಟಿಹಳ್ಳಿ ಹಾಗೂ ಮದ್ದೂರು ತಾಲ್ಲೂಕಿನ ನಿಡಘಟ್ಟ ನಡುವಿನ ರೈಲು ಮಾರ್ಗದಲ್ಲಿ ಸೋಮವಾರ ಸಂಜೆ ವಿದ್ಯುತ್ ತಂತಿ ತುಂಡಾದ ಪರಿಣಾಮ ಚಾಮುಂಡಿ ಎಕ್ಸ್‌ಪ್ರೆಸ್‌ ಸೇರಿದಂತೆ ಹಲವು ರೈಲುಗಳು ಒಂದು ಗಂಟೆ ತಡವಾಗಿ ಮೈಸೂರು ತಲುಪಿದವು.

ರಾತ್ರಿ 7.30ರ ಸುಮಾರಿಗೆ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಈ ಸಂದರ್ಭ ರೈಲು ಮಾರ್ಗದ ವಿದ್ಯುತ್ ತಂತಿಯು‌ ತುಂಡಾಗಿ ಹಳಿಗಳ ಮೇಲೆ ಬಿದ್ದಿತ್ತು. ಕೂಡಲೇ ಎಚ್ಚೆತ್ತ ಸಿಬ್ಬಂದಿ ಬೆಂಗಳೂರು- ಮೈಸೂರು ನಡುವಿನ ಎಲ್ಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದರು. ಸುಮಾರು ಒಂದು ಗಂಟೆ ದುರಸ್ತಿ ಕಾರ್ಯದ ಬಳಿಕ 8.50ರ ಸುಮಾರಿಗೆ ರೈಲು ಸಂಚಾರ ಪುನರಾರಂಭಗೊಂಡಿತು.

ಘಟನೆಯಿಂದಾಗಿ ಈ ಮಾರ್ಗದಲ್ಲಿ ರಾತ್ರಿ ವೇಳೆ ಸಂಚರಿಸುವ ಎಲ್ಲ ರೈಲುಗಳ ಸೇವೆಯಲ್ಲಿ ವ್ಯತ್ಯಯವಾಗಿತ್ತು. ರಾತ್ರಿ 9.05ಕ್ಕೆ ಮೈಸೂರಿಗೆ ಬರಬೇಕಿದ್ದ ಚಾಮುಂಡಿ ಎಕ್ಸ್‌ಪ್ರೆಸ್‌ ರಾತ್ರಿ 10ಕ್ಕೆ ಮೈಸೂರಿಗೆ ಬಂದಿತು. ರಾತ್ರಿ 9.15ಕ್ಕೆ ಬರಬೇಕಿದ್ದ ವಿಶ್ವಮಾನವ ಎಕ್ಸ್‌ಪ್ರೆಸ್ 10.14ಕ್ಕೆ, 11.30ಕ್ಕೆ ಬರಬೇಕಿದ್ದ ಮೈಸೂರು ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ 11.48ಕ್ಕೆ ಮೈಸೂರು ನಿಲ್ದಾಣ ತಲುಪಿದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.