ADVERTISEMENT

ಸಹಕಾರಿ ಸಂಘ ಉದ್ಘಾಟನೆ ನಾಳೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 15:32 IST
Last Updated 10 ಅಕ್ಟೋಬರ್ 2019, 15:32 IST

ಮೈಸೂರು: ಜಿಲ್ಲಾ ಛಾಯಾ ಸ್ನೇಹ ಸೌಹಾರ್ದ ಸಹಕಾರಿ ಸಂಘದ ಉದ್ಘಾಟನಾ ಸಮಾರಂಭ ಅ.12ರ ಶನಿವಾರ ಕುವೆಂಪು ನಗರದ ಚಿಕ್ಕಮ್ಮಾನಿಕೇತನ ಕಮ್ಯುನಿಟಿ ಹಾಲ್‍ನಲ್ಲಿ ನಡೆಯಲಿದೆ ಎಂದು ಆಡಳಿತ ಮಂಡಳಿ ಉಪಾಧ್ಯಕ್ಷ ಸಿ.ಅಭಿನಂದನ್ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸಂಘವನ್ನು ಉದ್ಘಾಟಿಸಲಿದ್ದು, ಸಂಸದ ಪ್ರತಾಪಸಿಂಹ, ಶಾಸಕ ಎಲ್.ನಾಗೇಂದ್ರ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಭಾಗಿಯಾಗಲಿದ್ದಾರೆ. ಮೈಸೂರು ಜಿಲ್ಲಾ ಛಾಯಾ ಸ್ನೇಹ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಎಂ.ಎಸ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸುವರು ಎಂದು ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಉದ್ಘಾಟನೆ ದಿನ ವೇದಿಕೆ ಕಾರ್ಯಕ್ರಮಕ್ಕೂ ಮುಂಚಿತವಾಗಿ ವೃತ್ತಿನಿರತ ಛಾಯಾಗ್ರಾಹಕರಿಗೆ ವಿವಿಧ ಪ್ರಸಿದ್ಧ ಕಂಪನಿಗಳಿಂದ ನೂತನ ತಂತ್ರಜ್ಞಾನಗಳು ಮತ್ತು ಉನ್ನತ ಸಲಕರಣೆಗಳ ಬಗ್ಗೆ ಉಚಿತ ಕಾರ್ಯಗಾರ, ವಸ್ತು ಪ್ರದರ್ಶನ, ಮಾರಾಟ ಮೇಳ ಆಯೋಜಿಸಲಾಗಿದೆ. ಸಹಕಾರಿ ಸದಸ್ಯರು ಮತ್ತು ಎಲ್ಲಾ ಜಿಲ್ಲೆಗಳ ವಿವಿಧ ಸಂಘ–ಸಂಸ್ಥೆಗಳ ಸದಸ್ಯರು ಭಾಗವಹಿಸಬಹುದು’ ಎಂದರು.

ADVERTISEMENT

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಜಾರಿಗೊಳಿಸಲಾಗಿರುವ ಉಪಯುಕ್ತ ವಿಮಾ ಸೌಲಭ್ಯಗಳ ಬಗ್ಗೆ ಮಾಹಿತಿ, ಉಚಿತ ಆರೋಗ್ಯ ತಪಾಸಣಾ ಶಿಬಿರ ಸಹ ಆಯೋಜಿಸಲಾಗಿದೆ. ಈ ಸಂಘ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಯಾಚರಿಸಲಿದೆ’ ಎಂದು ತಿಳಿಸಿದರು.

ಮಂಡಳಿ ಕಾರ್ಯಾಧ್ಯಕ್ಷ ಎಂ.ಎಸ್.ಶ್ರೀನಿಧಿ, ಸದಸ್ಯರಾದ ಎಂ.ಆರ್.ಉಮೇಶ್, ಜಿ.ಟಿ.ಸುರೇಶ್‍ಕುಮಾರ್, ಎನ್.ಮೋಹನ್ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.