ಮೈಸೂರು: ‘ಪೂರ್ವ ಸಿದ್ಧತೆಯೊಂದಿಗೆ ವೇಳಾಪಟ್ಟಿ ತಯಾರಿಸಿಕೊಂಡು, ಪುಸ್ತಕಗಳನ್ನು ಏಕಾಗ್ರತೆಯಿಂದ ಓದಿ ವಿಷಯ ಗ್ರಹಿಸಿದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಬಹುದು’ ಎಂದು ಪ್ರೊಬೇಷನರಿ ಡಿವೈಎಸ್ಪಿ ಎಂ. ಮಹೇಂದ್ರ ಹೇಳಿದರು.
ನಗರದ ಸರಸ್ವತಿಪುರಂನಲ್ಲಿರುವ ಗ್ಲೋಬಲ್ ಕಾಂಪಿಟೇಟಿವ್ ಅಕಾಡೆಮಿಯಿಂದ ನಡೆದ ಕೆಎಎಸ್ ಮತ್ತು ಪಿಎಸ್ಐ ಪರೀಕ್ಷೆಗಳ ಕುರಿತ ಉಚಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಸಾಮಾಜಿಕ ಜಾಲತಾಣದ ಬಳಕೆಯು ಸಮಯ ಹಾಳು ಮಾಡುತ್ತದೆ. ಇದರಿಂದ ದೂರ ಉಳಿದು ಚೆನ್ನಾಗಿ ಓದಿ ಮುಖ್ಯ ಮಾಹಿತಿಗಳನ್ನು ಟಿಪ್ಪಣಿ ಮಾಡಿಕೊಳ್ಳುವ ಮೂಲಕ ಪರೀಕ್ಷೆಗೆ ತಯಾರಾಗಬೇಕು’ ಎಂದರು.
ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ, ‘ಈ ಕಾಲಘಟ್ಟ ಸ್ಪರ್ಧಾತ್ಮಕವಾದದ್ದು. ಯಾವುದೇ ನೌಕರಿಗೆ ಹೋಗಬೇಕಾದರೂ ತೀವ್ರ ಪೈಪೋಟಿ ಇದ್ದೇ ಇರುತ್ತದೆ. ಗುರಿ ಮತ್ತು ದಾರಿ ಸ್ಪಷ್ಟಪಡಿಕೊಂಡು ಮುಂದಡಿ ಇಡಬೇಕು. ಓದಿದ್ದನ್ನು ಮನನ ಮಾಡಿಕೊಂಡು, ಆಗಾಗ ಪುನರಾವಲೋಕಿಸುವುದರಿಂದ ಅದು ನೆನಪಿನಲ್ಲಿ ಉಳಿಯುತ್ತದೆ’ ಎಂದು ಕಿವಿಮಾತು ಹೇಳಿದರು.
ಸರಸ್ವತಿಪುರಂ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಿ.ಎಂ. ರವೀಂದ್ರ ‘ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಬಗೆ' ಕುರಿತು ಉಪನ್ಯಾಸ ನೀಡಿದರು. ಸಂಪನ್ಮೂಲ ವ್ಯಕ್ತಿ ಕೆ. ರಾಜೇಶ್ ಅವರ ‘ಸಾಮಾನ್ಯ ಭೂಗೋಳವಿಜ್ಞಾನ’ ಪುಸ್ತಕ ಬಿಡುಗಡೆ ಮಾಡಲಾಯಿತು.
ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎ.ಇ. ರಘು ಆಲನಹಳ್ಳಿ ಅಧ್ಯಕ್ಷತೆ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.