ADVERTISEMENT

ಅವ್ಯವಹಾರ ಆರೋಪ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 14:17 IST
Last Updated 12 ಅಕ್ಟೋಬರ್ 2020, 14:17 IST
ಸಿಎಸ್‌ಟಿ-ಟಿಎ ಬೆನಿಫಿಶರಿಸ್ ಮತ್ತು ಸ್ಟೆಕ್ ಹೋಲ್ಡರ್ಸ್‌ನ ಸದಸ್ಯರು ಅವ್ಯವಹಾರ ಖಂಡಿಸಿ ಪ್ರತಿಭಟಿಸಿದರು
ಸಿಎಸ್‌ಟಿ-ಟಿಎ ಬೆನಿಫಿಶರಿಸ್ ಮತ್ತು ಸ್ಟೆಕ್ ಹೋಲ್ಡರ್ಸ್‌ನ ಸದಸ್ಯರು ಅವ್ಯವಹಾರ ಖಂಡಿಸಿ ಪ್ರತಿಭಟಿಸಿದರು   

ಮೈಸೂರು: ಸಿಎಸ್‌ಟಿ-ಟಿಎ ಕಂಪನಿಗೆ ಸೇರಿದ ಮಿಷನ್ ಆಸ್ಪತ್ರೆ ಹಾಗೂ ವಿದ್ಯಾ ಸಂಸ್ಥೆಗಳ ಆಸ್ತಿ, ಹಣಕಾಸಿನ ವಹಿವಾಟಿನಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಿ ಸಿಎಸ್‌ಟಿ-ಟಿಎ ಬೆನಿಫಿಶರಿಸ್ ಮತ್ತು ಸ್ಟೆಕ್ ಹೋಲ್ಡರ್ಸ್ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ಜಮಾಯಿಸಿದ ಪ್ರತಿಭಟನಕಾರರು, ಬಿಷಪ್ ಮೋಹನ್ ಮನೋರಾಜ್ ಹಾಗೂ ವಿನ್ಸೆಂಟ್ ಪಾಲಣ್ಣ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಭಿತ್ತಿ ಫಲಕಗಳನ್ನು ಪ್ರದರ್ಶಿಸಿದರು.

ಪ್ರತಿಭಟನಕಾರ ಎಸ್.ಪಿ.ಕುಮಾರ್ ಮಾತನಾಡಿ, ‘ಸಂಸ್ಥೆಯ ಆಸ್ತಿಯನ್ನು ಹಾಳು ಮಾಡುತ್ತಿರುವ ಬಿಷಪ್‌ಗೆ ಧಿಕ್ಕಾರ. ಬಿಷಪ್ ಮೋಹನ್ ಮನೋರಾಜ್ ಹಾಗೂ ವಿನ್ಸೆಂಟ್ ಪಾಲಣ್ಣ ತಮ್ಮದೇ ರಾಜ್ಯಭಾರ ನಡೆಸಿದ್ದಾರೆ’ ಎಂದು ದೂರಿದರು.

ADVERTISEMENT

‘ಸಿಎಸ್‌ಟಿ ಹಾಗೂ ಕೆಎಸ್‌ಡಿಯ ಆಸ್ತಿಗಳನ್ನು ಇವರಿಬ್ಬರೂ ಸೇರಿಕೊಂಡು ಹಾಳು ಮಾಡುತ್ತಿದ್ದಾರೆ. ಈ ಸಂಘಗಳ ಹಣವನ್ನು ಬೇರೆ ಉದ್ದೇಶಕ್ಕೆ ಬಳಸುವಂತಿಲ್ಲ. ಆದರೆ, ಇವರು ತಮ್ಮ ಅಕ್ರಮಕ್ಕೆ ಬಳಸುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಿ, ಸಭೆಗಳಿಗೆ ಬಹಿಷ್ಕಾರ ಹಾಕಿ ನ್ಯಾಯ ಕೇಳದ ರೀತಿ ಮಾಡುತ್ತಿದ್ದಾರೆ’ ಎಂದು ಕಿಡಿಕಾರಿದರು.

ಸಿಎಸ್‌ಟಿ-ಟಿಎ ಬೆನಿಫಿಶರಿಸ್ ಮತ್ತು ಸ್ಟೆಕ್ ಹೋಲ್ಡರ್ಸ್‌ನ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.