ADVERTISEMENT

ಎರಡು ತಿಂಗಳಲ್ಲಿ ಕೋವಿಡ್‌ಗೆ ಲಸಿಕೆ: ಪ್ರೊ.ರಂಗಪ್ಪ ವಿಶ್ವಾಸ

ಎಬೋಲಾ, ಸಾರ್ಸ್‌ನಷ್ಟು ಭೀಕರ ಅಲ್ಲ ಕೊರೊನಾ ವೈರಸ್‌‌: ‌ಪ್ರೊ.ರಂಗಪ್ಪ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2020, 14:19 IST
Last Updated 3 ಅಕ್ಟೋಬರ್ 2020, 14:19 IST
ಪ್ರೊ.ಕೆ.ಎಸ್‌.ರಂಗಪ್ಪ
ಪ್ರೊ.ಕೆ.ಎಸ್‌.ರಂಗಪ್ಪ   

ಮೈಸೂರು: ಇನ್ನು ಎರಡು ತಿಂಗಳಲ್ಲಿ ಕೋವಿಡ್‌-19ಗೆ ಲಸಿಕೆ ಸಿಗಲಿದೆ ಎಂದು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಸಂಶೋಧಕ ಪ್ರೊ.ಕೆ.ಎಸ್‌.ರಂಗಪ್ಪ ಶನಿವಾರ ಇಲ್ಲಿ ತಿಳಿಸಿದರು.

ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿಗಳೊಂದಿಗೆ ಸೇರಿ ದಿ ಜನ್ನರ್‌ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ನಡೆದಿದೆ. ಮೂರನೇ ಹಂತ ತಲುಪಿದ್ದು, ಆರು ಸಾವಿರ ಪರಿತಣರು ಈ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.

ಹಲವಾರು ದೇಶಗಳಲ್ಲಿ ಈಗ ಲಸಿಕೆ ಕಂಡು ಹಿಡಿಯಲು ನೂರಾರು ಕ್ಲಿನಿಕಲ್ ಟ್ರಯಲ್‌ಗಳು ವಿವಿಧ ಹಂತಗಳಲ್ಲಿ ನಡೆಯುತ್ತಿವೆ. ಒಂದೊಂದು ದೇಶದ ಭೌತಿಕ, ಜೈವಿಕ, ಜನಾಂಗೀಯ ಸ್ಥಿತಿಗತಿ ಆಧರಿಸಿ ಪ್ರಯೋಗ ನಡೆಸಲಾಗಿದೆ. ಏಷ್ಯಾದವರ ವಂಶವಾಹಿನಿಯೇ ಬೇರೆ, ಅಮೆರಿಕದವರ ವಂಶವಾಹಿನಿಯೇ ಬೇರೆ. ಹೀಗಾಗಿ, ಒಮ್ಮತದ ಲಸಿಕೆ ಕಂಡುಹಿಡಿಯುವ ಪ್ರಯತ್ನ ನಡೆದಿದೆ ಎಂದು ಹೇಳಿದರು.

ADVERTISEMENT

ಎಬೋಲಾ, ಸಾರ್ಸ್‌, ಎಚ್‌1ಎನ್‌1ಗಿಂತ ಭೀಕರ ವೈರಾಣು ಅಲ್ಲ. ಹರಡುವಿಕೆ ಪ್ರಮಾಣ ಹೆಚ್ಚು. ಹೀಗಾಗಿ, ಮಾಸ್ಕ್‌ ಧರಿಸುವುದು, ಕೈ ಸ್ವಚ್ಛಗೊಳಿಸಿಕೊಳ್ಳುವುದು ಅಗತ್ಯ ಎಂದರು.

ಕ್ಯಾನ್ಸರ್‌ ಸಂಶೋಧನೆ ಸ್ಥಗಿತ: ಭಾರತ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಕ್ಯಾನ್ಸರ್‌ ರೋಗಕ್ಕೆ ಸಂಬಂಧಿಸಿದ ಸಂಶೋಧನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂದು ಪ್ರೊ.ರಂಗಪ್ಪ ಹೇಳಿದರು.

‘ನಾನು ಮೊದಲು ಭಾರತೀಯ. ಆಮೇಲೆ ಸಂಶೋಧಕ, ವಿಜ್ಞಾನಿ, ವಿಶ್ರಾಂತ ಕುಲಪತಿ. ದೇಶದ ನಿಲುವಿಗೆ ನನ್ನ ಬೆಂಬಲವಿದೆ. ದೇಶಕ್ಕೆ ವಿರುದ್ಧವಾಗಿ ನಾನೆಂದೂ ಹೋಗಲಾರೆ’ ಎಂದರು.

ಎಐಐಎಂಎಸ್‌ ಸದಸ್ಯರಾಗಿ ನಾಮನಿರ್ದೇಶನ

‘ಸುಮಾರು 500 ಸಂಶೋಧನಾ ಪ್ರಬಂಧಗಳನ್ನು ವಿಶ್ವದ ಖ್ಯಾತ ಜರ್ನಲ್‌ಗಳಲ್ಲಿ ಪ್ರಕಟಿಸಿದ್ದೇನೆ. ಹೀಗಾಗಿ, ಕೇಂದ್ರ ಸರ್ಕಾರವು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್‌) ಆಡಳಿತ ಮಂಡಳಿ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದೆ’ ಎಂದು ಪ್ರೊ.ರಂಗಪ್ಪ ಹೇಳಿದರು.

ಎಐಐಎಂಎಸ್‌ ಅಧ್ಯಕ್ಷರೂ ಆಗಿರುವ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್‌ ನನ್ನ ಮೇಲೆ ನಂಬಿಕೆ ಇಟ್ಟು ಈ ಸಂಸ್ಥೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂದರು.

ನವದೆಹಲಿಯ ಕೌನ್ಸಿಲ್‌ ಆಫ್‌ ಸೈಂಟಿಫಿಕ್ ಅಂಡ್‌ ಇಂಡಸ್ಟ್ರಿಯಲ್‌ ರಿಸರ್ಚ್‌ನಲ್ಲಿ (ಸಿಎಸ್‌ಐಆರ್) ಅ.1ರಂದು ಎಮೆರಿಟಸ್‌ ಹಿರಿಯ ವಿಜ್ಞಾನಿ ಯಾಗಿ ನೇಮಕವಾಗಿದ್ದೇನೆ. ವೇತನ ಹಾಗೂ ಇತರ ಸೌಲಭ್ಯ ಸಿಗಲಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.