ಹುಣಸೂರು ನಗರದ ಸರ್ಕಾರಿ ನೌಕರರ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಜಿಲ್ಲಾ ದಲಿತ ಮಹಿಳಾ ಒಕ್ಕೂಟ ಆಯೋಜಿಸಿದ್ದ ದಿ.ಪ್ರೊ.ಬಿ.ಕೃಷ್ಣಪ್ಪ ಜಯಂತಿಯಲ್ಲಿ ಭಾವಚಿತ್ರಕ್ಕೆ ಪ್ರಮುಖರು ಪುಷ್ಪನಮನ ಸಲ್ಲಿಸಿದರು
ಹುಣಸೂರು: ಕರ್ನಾಟಕ ನೆಲದಲ್ಲಿ ಅಂಬೇಡ್ಕರ್ ಸಿದ್ದಾಂತದ ತಳಹದಿಯಲ್ಲಿ ಶೋಷಿತ ಸಮುದಾಯಗಳಿಗೆ ಧ್ವನಿಯಾಗಿ ಹೋರಾಟ ನಡೆಸಿದ ಪ್ರೊ.ಬಿ.ಕೃಷ್ಣಪ್ಪ ಕೊಡುಗೆ ಜೀವಂತ ಎಂದು ಸೋಷಿಯಲ್ ಜಸ್ಟೀಸ್ ಫೋರಂ ಜಿಲ್ಲಾಘಟಕದ ಅಧ್ಯಕ್ಷ ಜೆ.ಮಹದೇವ್ ಹೇಳಿದರು.
ನಗರದ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ದಲಿತ ಮಹಿಳಾ ಒಕ್ಕೂಟ ಆಯೋಜಿಸಿದ್ದ ದಲಿತ ಚಳುವಳಿ ಚೇತನ ದಿ.ಪ್ರೊ.ಬಿ.ಕೃಷ್ಣಪ್ಪ ಅವರ 88 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಶೋಷಿತರ ಪರ 5 ದಶಕಗಳ ಕಾಲ ಹೋರಾಟ ನಡೆಸಿ ಜಾಗೃತಿ ಮೂಡಿಸಿ ದಸಂಸ ಹುಟ್ಟಿಗೆ ಮೂಲಪುರುಷರಾದ ಇವರ ಸಾಮಾಜಿಕ ಚಳುವಳಿಯನ್ನು ಕಟ್ಟಿ ಬೆಳೆಸಿ ನೊಂದವರಿಗೆ ಧ್ವನಿಯಾಗಿದ್ದ ಮಹಾಚೇತನ ಎಂದರು.
70 ರ ದಶಕದಲ್ಲಿ ಶಿವಮೊಗ್ಗೆದಲ್ಲಿ ನಡೆದ ಪತ್ರ ಸಂಗಪ್ಪನ ಕೊಗ್ಗೊಲೆಯನ್ನು ಬಹಿರಂಗವಾಗಿ ಖಂಡಿಸಿ ಸಾರ್ವಜನಿಕ ಹೋರಾಟವನ್ನು ರೂಪಿಸುವ ಮೂಲಕ ಶೋಷಿತರ ಧ್ವನಿಯಾಗಿ ತಮ್ಮ ಹೋರಾಟ ಆರಂಭಿಸಿದರು. ಚಂದ್ರಗುತ್ತಿ ಬೆತ್ತಲೆ ಸೇವೆ,ಹೆಂಡ ಬೇಡ ವಸತಿ ಶಾಲೆ ಬೇಕು ಎನ್ನುವ ಹೋರಾಟಕ್ಕೆ ಪುಷ್ಟಿಕರಿಸಿ ಅಂಬೇಡ್ಕರ್ ಸಿದ್ದಾಂತದ ತಳಹದಿಯಲ್ಲಿ ಹೋರಾಟ ನಡೆಸಿ ರಾಜ್ಯಕ್ಕೆ ಮಾದರಿಯಾಗಿದ್ದರು ಎಂದರು.
ದಲಿತ ಮುಖಂಡ ವರದರಾಜು ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪ , ಸಿದ್ದಲಿಂಗಯ್ಯ ಹಾಗೂ ಸಾಹಿತಿ ದೇವನೂರು ಮಹದೇವ ಅವರ ಜಯಂತಿಗಳು ಒಟ್ಟಾಗಿ ಆಗಮಿಸಿದ್ದು ಈ ಮೂರೂ ಮಹನಿಯರು ದಲಿತ ಸಮುದಾಯಗಳ ಕಣ್ಣುಗಳು. ದಲಿತರ ಸರ್ವತೋಮುಖ ಅಭಿವೃದ್ಧಿಗೆ ತಮ್ಮದೆ ಕೊಡುಗೆ ನೀಡಿದ್ದು ಇವರ ಲೇಖನ ಸರ್ಕಾರವನ್ನು ಎಚ್ಚರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದವು ಎಂದರು. ಕಾರ್ಯಕ್ರಮದಲ್ಲಿ ದಲಿತ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮಹದೇವಮ್ಮ, ಜಿಲ್ಲಾ ಸಂಯೋಜಕ ಪ್ರಕಾಶ್ ಎಂ.ಆರ್. ಹೊಸಳ್ಳಿ, ಅಹಿಂದಾ ತಾ.ಘಟಕದ ಅಧ್ಯಕ್ಷ ಡೇವಿಡ್ ರತ್ನಪುರಿ, ಸೋಮಯ್ಯ, ಜಾನ್ ಕ್ರಿಸ್ಟೋಫರ್, ವಿಜಯ್ ಕುಮಾರ್ ಸೇರಿದಂತೆ ದಸಂಸ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.