ADVERTISEMENT

ಹಲ್ಲೆ ನಡೆಸಿ ಅಡುಗೆ ತಯಾರಕಿ ಹತ್ಯೆ

ಎಸ್‌ಟಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 9:31 IST
Last Updated 17 ಫೆಬ್ರುವರಿ 2019, 9:31 IST
ಎಚ್.ಡಿ.ಕೋಟೆ ಪಟ್ಟಣದ ಯಲ್ಲಮ್ಮ ತಾಯಿ ದೇವಸ್ಥಾನ ಸಮೀಪದಲ್ಲಿರುವ ಪರಿಶಿಷ್ಟ ಪಂಗಡದ ಬಾಲಕರ ವಿದ್ಯಾರ್ಥಿನಿಲಯ
ಎಚ್.ಡಿ.ಕೋಟೆ ಪಟ್ಟಣದ ಯಲ್ಲಮ್ಮ ತಾಯಿ ದೇವಸ್ಥಾನ ಸಮೀಪದಲ್ಲಿರುವ ಪರಿಶಿಷ್ಟ ಪಂಗಡದ ಬಾಲಕರ ವಿದ್ಯಾರ್ಥಿನಿಲಯ   

ಎಚ್.ಡಿ.ಕೋಟೆ: ಪಟ್ಟಣದ ಯಲ್ಲಮ್ಮ ತಾಯಿ ದೇವಸ್ಥಾನ ಸಮೀಪದಲ್ಲಿರುವ ಪರಿಶಿಷ್ಟ ಪಂಗಡದ ಬಾಲಕರ ವಿದ್ಯಾರ್ಥಿ ನಿಲಯದ ಅಡುಗೆ ತಯಾರಕಿ ಪುಟ್ಟಮ್ಮ (40) ಎಂಬುವರನ್ನು ಅದೇ ವಿದ್ಯಾರ್ಥಿನಿಲಯದ ಅಡುಗೆ ತಯಾರಕರಾದ ಮಹದೇವಮ್ಮ, ಲಕ್ಷ್ಮಮ್ಮ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ವಿದ್ಯಾರ್ಥಿ ನಿಲಯದಲ್ಲಿ ನಡೆಯುತ್ತಿದ್ದ ಅವ್ಯವಹಾರದ ಬಗ್ಗೆ ವಾರ್ಡನ್‌ ಚಂದ್ರಕಲಾ ಅವರಿಗೆ ಪುಟ್ಟಮ್ಮ ಮಾಹಿತಿ ನೀಡಿದ್ದರು. ಇದರಿಂದ ಕುಪಿತಗೊಂಡ ಮಹಾದೇವಮ್ಮ, ಲಕ್ಷ್ಮಮ್ಮ ಜ.29ರಂದು ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಪುಟ್ಟಮ್ಮ ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ, ಹಲ್ಲೆ ನಡೆಸಿರುವ ಬಗ್ಗೆ ಪುಟ್ಟಮ್ಮ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್‌.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ದೂರು
ನೀಡಿದ್ದಾರೆ. ಫೆ.11ರಂದು ಮೃತಪಟ್ಟಿದ್ದಾರೆ.

ಪುಟ್ಟಮ್ಮ ಅವರಿಗೆ ಇಬ್ಬರು ಪುತ್ರರು ಇದ್ದಾರೆ. ಈ ಪ್ರಕರಣವನ್ನು ಮುಚ್ಚಿಹಾಕಲು ಕೆಲ ಮುಖಂಡರು ಮುಂದಾಗಿದ್ದಾರೆ. ನ್ಯಾಯ ಪಂಚಾಯಿತಿ ಮಾಡಿಸಿ, ಪುಟ್ಟಮ್ಮ ಅವರ ಕುಟುಂಬಸ್ಥರಿಗೆ ಮಹದೇವಮ್ಮ ಹಾಗೂ ಲಕ್ಷ್ಮಮ್ಮ ಅವರಿಂದ ₹1 ಲಕ್ಷ ಪರಿಹಾರ ಕೊಡಿಸಿದ್ದಾರೆ ಎನ್ನಲಾಗಿದೆ.

ADVERTISEMENT

ಅಲ್ಲದೆ, ಪ್ರಕರಣ ಸಂಬಂಧ ಮಹದೇವಮ್ಮ ಹಾಗೂ ಲಕ್ಷ್ಮಮ್ಮ ಅವರ ವಿಚಾರಣೆ ನಡೆಸಲಾಗಿದೆ. ಪುಟ್ಟಮ್ಮ ಅವರ ಮರಣೋತ್ತರ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಸಬ್‌ಇನ್‌ಸ್ಪೆಕ್ಟರ್‌ ವಿ.ಸಿ.ಅಶೋಕ್‌ ತಿಳಿಸಿದ್ದಾರೆ. ಆದರೆ, ಮಹದೇವಮ್ಮ ಹಾಗೂ ಲಕ್ಷ್ಮಮ್ಮ ಅವರನ್ನು ವಶಕ್ಕೆ ಪಡೆದಿಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತಿಲ್ಲ.

ಪುಟ್ಟಮ್ಮ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಪಿಐ ಹರೀಶ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.