ಮೈಸೂರು: ಇಲ್ಲಿನ ಗಾಂಧಿನಗರದ ನಿವಾಸಿ ಉಸ್ತಾದ್ ಪೈಲ್ವಾನ್ ಆರ್.ರಾಮಲಿಂಗಯ್ಯ (92) ಅವರು ಮಂಗಳವಾರ ನಸುಕಿನಲ್ಲಿ ನಿಧನರಾದರು. ಇವರಿಗೆ ಇಬ್ಬರು ಪುತ್ರಿ ಹಾಗೂ ಮೂವರು ಪುತ್ರರು ಇದ್ದಾರೆ.
ಇವರು ನಗರದ ಮೊಟ್ಟಮೊದಲ ದಲಿತ ಕುಸ್ತಿ ರೆಫ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ರೈಲ್ವೆ ಇಲಾಖೆಯಿಂದ ನಿವೃತ್ತರಾದ ಬಳಿಕ ಕುಸ್ತಿ ಕ್ರೀಡೆಯಲ್ಲಿ ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದ್ದರು. ಅಪಾರ ಶಿಷ್ಯವರ್ಗ ಇವರಿಗಿತ್ತು.
ಇಲ್ಲಿನ ಸಾಹುಕಾರ್ ಚೆನ್ನಯ್ಯ ಕುಸ್ತಿ ಅಖಾಡದಲ್ಲಿ 4 ದಶಕಗಳ ಕಾಲ ನಡೆದ ಎಲ್ಲ ಕುಸ್ತಿ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಹಾಗೂ ಗಾಂಧಿನಗರದ ಹತ್ತು ಜನಗಳ ಗರಡಿಯ ಉಸ್ತಾದರಾಗಿ ಸೇವೆ ಸಲ್ಲಿಸಿದ್ದರು. ವೀರೇಂದ್ರಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ದಸರಾ ಕುಸ್ತಿ ಸಮಾರಂಭದಲ್ಲಿ ಸುವರ್ಣ ಪದಕ ನೀಡಿ ಇವರನ್ನು ಗೌರವಿಸಲಾಗಿತ್ತು.
ಇವರ ಅಂತ್ಯಕ್ರಿಯೆಯು ಗಾಂಧಿನಗರದ ಆದಿ ಕರ್ನಾಟಕ ರುದ್ರಭೂಮಿಯಲ್ಲಿ ನೆರವೇರಿತು.
‘ಇವರ ನಿಧನವು ಮೈಸೂರು ಮಾತ್ರವಲ್ಲ ರಾಜ್ಯದ ಕುಸ್ತಿ ಕ್ರೀಡೆಗೆ ತುಂಬಲಾರದ ನಷ್ಟ ಉಂಟಾಗಿದೆ’ ಎಂದು ಜಯಚಾಮರಾಜ ಒಡೆಯರ್ ಗರಡಿ ಸಂಘ ಸಾಹುಕಾರ್ ಎಸ್ ಚೆನ್ನಯ್ಯ ಕುಸ್ತಿ ಅಖಾಡದ ಅಧ್ಯಕ್ಷರಾದ ಕೆ.ಚಂದ್ರಪ್ರಕಾಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾದ ಯಜಮಾನ್ ಪೈಲ್ವಾನ್ ಎಸ್ ಮಹದೇವ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.