ದಂಡ (ಸಾಂದರ್ಭಿಕ ಚಿತ್ರ)
– ಐಸ್ಟಾಕ್ ಚಿತ್ರ
ಹುಣಸೂರು: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣ ಎದುರಿಸುತ್ತಿದ್ದ ಆರೋಪಿ ಕೆಂಡನಾಯಕ ಎಂಬಾತನಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ₹ 30 ಸಾವಿರ ದಂಡ ವಿಧಿಸಿ ಆದೇಶಿಸಿದೆ.
ಘಟನೆ ವಿವರ: ಹುಣಸೂರು ತಾಲ್ಲೂಕಿನ ಬಿಳಿಕೆರೆ ಹೋಬಳಿ ಧರ್ಮಾಪುರ ಗ್ರಾಮದ ನಿವಾಸಿ ಕೆಂಡನಾಯಕ ಅದೇ ಗ್ರಾಮದ ನಿವಾಸಿ ರಾಜನಾಯಕನಿಂದ ₹ 50 ಸಾವಿರ ಸಾಲ ಪಡೆದಿದ್ದನು. ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು. 2021 ರ ಸೆಪ್ಟೆಂಬರ್ 17 ರಂದು ರಾತ್ರಿ ರಾಜನಾಯಕನ ಮನೆ ಹಿಂಭಾಗದಿಂದ ಕೆಂಡನಾಯಕ ಹೋಗುತ್ತಿರುವುದನ್ನು ಗಮನಿಸಿ ಅನುಮಾನಗೊಂಡ ರಾಜನಾಯಕ, ಆರೋಪಿಯೊಂದಿಗೆ ಜಗಳ ನಡುವೆ ತಳ್ಳಾಟದಲ್ಲಿ ಕೆಂಡನಾಯಕನ ಕಾಲಿಗೆ ಗಾಯವಾಗಿತ್ತು. ಆ ದಿನವೇ ರಾತ್ರಿ 10 ಗಂಟೆಗೆ ಕೆಂಡನಾಯಕ ರಾಜನಾಯಕನ ಮನೆಗೆ ಬಂದು ಆತನನ್ನು ಹಿಗ್ಗಾಮಗ್ಗ ಥಳಿಸಿ ಮಾರಕಾಯುಧದಿಂದ ಕೊಲೆ ಮಾಡಿದ್ದನು.
ಬಿಳಿಕೆರೆ ಪೊಲೀಸ್ ಠಾಣೆಯ ಅಂದಿನ ಸರ್ಕಲ್ ಇನ್ಸ್ಪೆಕ್ಟರ್ ರವಿಕುಮಾರ್ ನ್ಯಾಯಾಲಯಕ್ಕೆ ದೋಷಾರೋಪ ಪತ್ರ ಸಲ್ಲಿಸಿದ್ದರು. ವಿಚಾರಣೆ ನಡೆಸಿದ 8 ನೇ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಟಿ.ಗೋವಿಂದಯ್ಯ ಜೂನ್ 11 ರಂದು ಆರೋಪಿ ಕೆಂಡನಾಯಕ ತಪ್ಪಿತಸ್ಥ ಎಂದು ತೀರ್ಪು ಹೊರ ಹಾಕಿ ಜೀವಾವಧಿ ಶಿಕ್ಷೆ ಮತ್ತು ₹ 30 ಸಾವಿರ ದಂಡ ವಿಧಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಎಂ.ಸಿ.ಶಿವಶಂಕರಮೂರ್ತಿ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.