ಮೈಸೂರು: ಮೈಸೂರಿನಲ್ಲಿ ನಡೆದಿದೆ ಎನ್ನಲಾದ ಭೂಹಗರಣಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಆಗ್ರಹಿಸಿದರು.
‘ನಾನು ಯಾವುದೇ ಅಧಿಕಾರಿ ಅಥವಾ ರಾಜಕಾರಣಿಯ ಪರ, ವಿರೋಧವಾಗಿ ಮಾತನಾಡುತ್ತಿಲ್ಲ. ವಾಸ್ತವ ಏನು ಎಂಬುದು ಸಾರ್ವಜನಿಕರಿಗೆ ತಿಳಿಯಬೇಕು. ಮೈಸೂರಿನಲ್ಲಿ ಆಗಿರುವ ಎಲ್ಲ ಭೂಹಗರಣಗಳು ಹೊರ ಬರಬೇಕು. ತಪ್ಪಿತಸ್ಥರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮವಹಿಸಬೇಕು’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
‘ರೋಹಿಣಿ ಸಿಂಧೂರಿ ಅವರು ಸಾ.ರಾ ಕಲ್ಯಾಣ ಮಂಟಪದ ಬಗ್ಗೆ ಮಾಡಿರುವ ಆರೋಪಗಳ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಕಲ್ಯಾಣ ಮಂಟಪ ಪತ್ನಿಯ ಹೆಸರಿನಲ್ಲಿದೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ. ಎಷ್ಟು ವಿಸ್ತೀರ್ಣದಲ್ಲಿ ಅದನ್ನು ಕಟ್ಟಲಾಗಿದೆ, ಪತ್ನಿಯ ಹೆಸರಿನಲ್ಲಿರುವ ಜಾಗ ಯಾರಿಂದ ಬಂತು ಎಂಬ ಬಗ್ಗೆ ಸರಿಯಾದ ದಾಖಲೆ ಬಿಡುಗಡೆ ಮಾಡಲಿ’ ಎಂದರು.
‘ಆ ಜಾಗವನ್ನು ನಿವೇಶನ ಮಾಡಲು ಖರೀದಿಸಲಾಗಿದ್ದು, ಅಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲಾಗಿದೆ ಎಂಬ ಆರೋಪ ಇದೆ. ಕಲ್ಯಾಣ ಮಂಟಪ ನಿರ್ಮಿಸಲು ಅನುಮತಿ ಪಡೆದುಕೊಂಡಿದ್ದೀರಾ ಎಂದು ಮೈಸೂರಿನ ಒಬ್ಬ ಸಾಮಾನ್ಯ ಪ್ರಜೆಯಾಗಿದ್ದುಕೊಂಡು ಪ್ರಶ್ನಿಸುತ್ತಿದ್ದೇನೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.