ADVERTISEMENT

ಕೊರೊನಾದಿಂದ ಆರ್ಥಿಕ ನಷ್ಟ; ಉದ್ಯಮಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 9:10 IST
Last Updated 12 ಆಗಸ್ಟ್ 2020, 9:10 IST

ಮೈಸೂರು: ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿ ಡಿ.ರಾಘವೇಂದ್ರ (36) ಅವರು ನೇಣು ಹಾಕಿಕೊಂಡು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊರೊನಾದಿಂದ ವ್ಯವಹಾರದಲ್ಲಿ ನಷ್ಟ ಸಂಭವಿಸಿ, ಆರ್ಥಿಕವಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಇದರಿಂದ ಖಿನ್ನತೆಗೆ ಜಾರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ. ಪ್ರಕರಣ ಸರಸ್ವತಿಪುರಂ ಠಾಣೆಯಲ್ಲಿ ದಾಖಲಾಗಿದೆ.

ವಂಚನೆ ಪ್ರಕರಣ; ತನಿಖಾ ವರದಿ ಸಲ್ಲಿಕೆ

ADVERTISEMENT

ಮೈಸೂರು: ಇಲ್ಲಿನ ಖಾಸಗಿ ಕಂಪನಿಯೊಂದು ಬಾಗಲಕೋಟೆಯ ರಾಘವೇಂದ್ರ ಎಂಬುವವರಿಗೆ ಮಾಡಿದೆ ಎನ್ನಲಾದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಅಪರಾಧ ವಿಭಾಗ ಪೊಲೀಸರು ತನಿಖಾ ವರದಿಯನ್ನು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಅವರಿಗೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

₹ 60 ಲಕ್ಷ ಮೊತ್ತವನ್ನು ನೀಡದೆ ಕಂಪನಿ ವಂಚಿಸಿದೆ ಎಂದು ರಾಘವೇಂದ್ರ ಅವರು ಜನವರಿ 26ರಂದು ನಗರ ಪೊಲೀಸ್ ಕಮಿಷನರ್‌ ಅವರಿಗೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸುವಂತೆ ಕಮಿಷನರ್ ಸಿಸಿಬಿ ಪೊಲೀಸರಿಗೆ ಸೂಚಿಸಿದ್ದರು.

₹ 32 ಸಾವಿರ ಕಿಸೆಗಳ್ಳತನ

ಮೈಸೂರು: ಜನತಾನಗರದ ನಿವಾಸಿ ಬಿ.ಆರ್.ಮಂಜುನಾಥ್ ಎಂಬುವವರು ಗುಂಡ್ಲುಪೇಟೆಯಿಂದ ಬಂದು ಚಾಮರಾಜಜೋಡಿ ರಸ್ತೆಯಲ್ಲಿನ ಲಕ್ಷ್ಮಿ ಟಾಕೀಸ್‌ ಬಳಿ ತಮ್ಮ ನಿವಾಸಕ್ಕೆ ಹೋಗಲು ಬಸ್‌ ಹತ್ತಿದ್ದಾರೆ. ಈ ವೇಳೆ ಇವರ ಕಿಸೆಯಿಂದ ₹ 32 ಸಾವಿರ ಇದ್ದ ಪರ್ಸ್‌ನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ಅವರು ಕೆ.ಆರ್.ಠಾಣೆಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.