ಮೈಸೂರು: ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) 50:50 ಅನುಪಾತದಲ್ಲಿ ಬದಲಿ ನಿವೇಶನಗಳ ಹಂಚಿಕೆಯಲ್ಲಿನ ಅಕ್ರಮ ಆರೋಪದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇ.ಡಿ)ವು ಇನ್ನಷ್ಟು ನಿವೇಶನಗಳ ಕುರಿತು ಮಾಹಿತಿ ಕೋರಿ ಮುಡಾ ಆಯುಕ್ತರಿಗೆ ಪತ್ರ ಬರೆದಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಇ.ಡಿ.ಯ ಬೆಂಗಳೂರು ಕಚೇರಿಯ ಸಹಾಯಕ ನಿರ್ದೇಶಕ ವಿ. ಮುರಳಿಕಣ್ಣನ್ ಮೇ 9ರಂದು ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
‘ಮೈಸೂರಿನ ಬಸವನಹಳ್ಳಿ ಸರ್ವೆ ಸಂಖ್ಯೆ 116/2ರಲ್ಲಿ 4 ಎಕರೆ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ 26 ವರ್ಷಗಳ ನಂತರವೂ ಭೂಮಿ ವಶಕ್ಕೆ ಪಡೆಯದ ಕಾರಣದಿಂದ ಹೈಕೋರ್ಟ್ 2018ರಲ್ಲಿ ಅಧಿಸೂಚನೆಯನ್ನು ರದ್ದುಪಡಿಸಿತ್ತು. ಆದಾಗ್ಯೂ 2023ರಲ್ಲಿ ಮತ್ತೆ ಅದೇ ಜಮೀನನ್ನು ಸ್ವಾಧೀನಕ್ಕೆ ಪಡೆದದ್ದು ಏಕೆ ಎಂಬುದರ ದಾಖಲೆ ನೀಡಿ’ ಎಂದು ಕೇಳಿದ್ದಾರೆ.
‘ಹೆಬ್ಬಾಳ ಸರ್ವೆ ಸಂಖ್ಯೆ 88/2ರಲ್ಲಿನ 2 ಎಕರೆ ಜಮೀನು, ದೇವನೂರು ಗ್ರಾಮದ ಸರ್ವೆ ಸಂಖ್ಯೆ 81/2ರಲ್ಲಿನ 2 ಎಕರೆ ಜಮೀನುಗಳಿಗೆ ಪರಿಹಾರ ವಿತರಣೆ ಹಾಗೂ ದಟ್ಟಗಳ್ಳಿ ಸರ್ವೆ ಸಂಖ್ಯೆ 168, 169/1, 176 ಹಾಗೂ 183/1ರಲ್ಲಿನ ಜಮೀನುಗಳಿಗೆ ಪರಿಹಾರವಾಗಿ 28 ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿ’ ಎಂದು ಅವರು ಪತ್ರದಲ್ಲಿ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.