ಮೈಸೂರು: ನಂಜನಗೂಡು ತಾಲ್ಲೂಕಿನಲ್ಲಿ, ಬುಡಕಟ್ಟು ಸಮುದಾಯದ ಯುವಕನೊಬ್ಬ ಮಂಗಳವಾರ ರಾತ್ರಿ ಕಾಡಾನೆಯ ಕಾಲ್ತುಳಿತಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಡೋರನಕಟ್ಟೆ ಆದಿವಾಸಿ ಕಾಲೊನಿಯ ಕೆಂಪ–ಚಿಕ್ಕಮ್ಮ ದಂಪತಿಯ ಪುತ್ರ ಗಣೇಶ್ (25) ಮೃತಪಟ್ಟ ಯುವಕ.
ಈತ ತನ್ನ ಚಿಕ್ಕಮ್ಮನ ಕುಟುಂಬ ವಾಸವಿದ್ದ ವೆಂಕಟಗಿರಿ ಕಾಲೊನಿಗೆ ತೆರಳಿದ್ದ. ರಾತ್ರಿ ಹತ್ತೂವರೆ ಹೊತ್ತಿಗೆ ತನ್ನ ಕಾಲೊನಿಗೆ ಮರಳುತ್ತಿದ್ದಾಗ, ರಸ್ತೆ ಬದಿಯೇ ಕಾಡಾನೆಯ ಕಾಲ್ತುಳಿತಕ್ಕೆ ಸಿಲುಕಿದ್ದಾನೆ ಎಂದು ಹುಲ್ಲಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.
ಯುವಕ ಮೃತಪಟ್ಟ ಸ್ಥಳಕ್ಕೆ ಹೆಡಿಯಾಲ ಅರಣ್ಯ ವಿಭಾಗದ ಎಸಿಎಫ್ ರವಿಕುಮಾರ್, ಆರ್ಎಫ್ಒ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಲಾಖೆಯಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.