ADVERTISEMENT

ಮೈಸೂರು: ಆರ್‌ಟಿಒ ಅಧಿಕಾರಿಗಳ ವಿರುದ್ಧ ರೈತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 1:44 IST
Last Updated 3 ನವೆಂಬರ್ 2020, 1:44 IST

ಮೈಸೂರು: ತರಕಾರಿ ಸಾಗಣೆ ಮಾಡು ತ್ತಿದ್ದ 2 ಲಾರಿಗಳನ್ನು ವಶಪಡಿಸಿಕೊಂಡ ಆರ್‌ಟಿಒ ಅಧಿಕಾರಿಗಳ ವಿರುದ್ಧ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ನೇತೃತ್ವದಲ್ಲಿ ಇಲ್ಲಿನ ಆರ್‌ಟಿಒ ಕಚೇರಿ ಮುಂಭಾಗ ಸೇರಿದ ರೈತರು ಅಧಿಕಾರಿಗಳ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಗುಂಡ್ಲುಪೇಟೆಯಿಂದ ಮೈಸೂರಿಗೆ ಹಾಗೂ ಮೈಸೂರಿನಿಂದ ಕೇರಳಕ್ಕೆ ತರಕಾರಿಗಳನ್ನು ಕೊಂಡೊಯ್ಯುತ್ತಿದ್ದ 2 ಲಾರಿಗಳನ್ನು ನಿಯಮ ಉಲ್ಲಂಘನೆಯ ಆರೋಪ ಹೊರಿಸಿ ದೊಡ್ಡ ಪ್ರಮಾಣದ ದಂಡ ವಿಧಿಸಿದರೆ ಚಾಲಕರು ಹಣ ಎಲ್ಲಿಂದ ತರಬೇಕು ಎಂದು ರೈತರು ಪ್ರಶ್ನಿಸಿದರು.

ADVERTISEMENT

ದಂಡ ವಿಧಿಸಿದ ನಂತರ ಅದರ ಪಾವತಿಗೆ ಕಾಲಾವಕಾಶ ಕೊಟ್ಟು ಕಳುಹಿಸಿದ್ದರೆ ರೈತರು ಶ್ರಮ ವಹಿಸಿ ಬೆಳೆದಿದ್ದ ತರಕಾರಿಗಳು ಉಳಿಯುತ್ತಿದ್ದವು. ಈಗ ವಶಪಡಿಸಿಕೊಂಡ ಕಾರಣದಿಂದಾಗಿ ತರಕಾರಿಗಳು ಒಂದು ರಾತ್ರಿ ಲಾರಿಯಲ್ಲೇ ಇದ್ದು ಗುಣಮಟ್ಟ ಕಳೆದುಕೊಂಡಿವೆ. ಇದರ ನಷ್ಟವನ್ನು ಅಧಿಕಾರಿಗಳು ಭರಿಸಬೇಕು ಎಂದು ಆಗ್ರಹಿಸಿದರು.‌

ಸ್ಥಳಕ್ಕೆ ಬಂದ ಅಧಿಕಾರಿಗಳು ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.

ಸಂಘಟನೆಯ ಅಧ್ಯಕ್ಷ ಮರಂಕಯ್ಯ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ಮಂಡಕಳ್ಳಿ ಮಹೇಶ್, ಚಂದ್ರೇಗೌಡ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.