ಮೈಸೂರು: ಅಂಬೇಡ್ಕರ್ ಭಾವಚಿತ್ರ ಇರುವ ಬ್ಯಾನರ್ ತೆರವುಗೊಳಿಸಿದವರ ಅಮಾನತಿಗೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾಲಯದ ಸಂಶೋಧಕರ ಸಂಘ ಹಾಗೂ ದಲಿತ ವಿದ್ಯಾರ್ಥಿಗಳ ಒಕ್ಕೂಟದ ಸದಸ್ಯರು ನಡೆಸುತ್ತಿದ್ದ ಅಹೋರಾತ್ರಿ ಧರಣಿ ಶುಕ್ರವಾರ ಕೊನೆಗೊಂಡಿತು.
ಸಂಘಟನೆಯ ವತಿಯಿಂದ ಅಂಬೇಡ್ಕರ್ ಜಯಂತಿಗೆ ಶುಭಕೋರಿ ಅಳವಡಿಸಿದ್ದ ಬ್ಯಾನರ್ ಅನ್ನು ಬುಧವಾರ ಆಡಳಿತ ಮಂಡಳಿ ಸಿಬ್ಬಂದಿ ತೆರವುಗೊಳಿಸಿದ್ದರು. ಇದನ್ನು ಖಂಡಿಸಿ ಸಂಘಟನೆ ಪ್ರಮುಖರು ಪ್ರತಿಭಟನೆ ಆರಂಭಿಸಿದ್ದರು. ಅಂದು ರಾತ್ರಿ ಟಯರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದರು. ಆಡಳಿತಾಧಿಕಾರಿ ರಾಮಚಂದ್ರ ಅವರ ವಿರುದ್ಧ ಜಯಲಕ್ಷ್ಮಿಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದರು.
ಗುರುವಾರವೂ ಪ್ರತಿಭಟನೆ ನಡೆಸಿದ್ದ ವಿದ್ಯಾರ್ಥಿಗಳು ಗಂಗೋತ್ರಿ ಬಂದ್ಗೆ ಮುಂದಾಗಿದ್ದರು. ಕುಲಪತಿಯು ಬ್ಯಾನರ್ ತೆರವಿಗೆ ಕಾರಣರಾದ ಆಡಳಿತಾಧಿಕಾರಿ ರಾಮಚಂದ್ರ ಹಾಗೂ ವಿಶೇಷಾಧಿಕಾರಿ ಕುಮಾರ್ ಅವರನ್ನು ಆ ಸ್ಥಾನದಿಂದ ವಜಾಗೊಳಿಸಿದರೂ, ಪ್ರತಿಭಟನಕಾರರು ಅವರ ಅಮಾನತಿಗೆ ಒತ್ತಾಯಿಸಿದ್ದರು. ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದರು.
ಶುಕ್ರವಾರ ಬ್ಯಾನರ್ ತೆರವುಗೊಳಿಸಿದ್ದ ಸ್ಥಳದಲ್ಲೇ ಹೊಸ ಬ್ಯಾನರ್ ಅಳವಡಿಸಿದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.