ADVERTISEMENT

ಓದಿನ ಜೊತೆಗೆ ಕ್ರೀಡೆಗೂ ಆದ್ಯತೆ ನೀಡಿ: ಶಾಸಕ ಡಿ.ರವಿಶಂಕರ್

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2024, 14:08 IST
Last Updated 13 ಆಗಸ್ಟ್ 2024, 14:08 IST
ಸಾಲಿಗ್ರಾಮ ತಾಲ್ಲೂಕಿನ ಕುಪ್ಪಹಳ್ಳಿಯಲ್ಲಿ ನಡೆದ ಮಿರ್ಲೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಶಾಸಕ ಡಿ.ರವಿಶಂಕರ್ ಮಂಗಳವಾರ ವಿಜೇತರಿಗೆ ಬಹುಮಾನ ವಿತರಿಸಿದರು. ಬಿಇಒ ಕೃಷ್ಣಪ್ಪ ಭಾಗವಹಿಸಿದ್ದರು
ಸಾಲಿಗ್ರಾಮ ತಾಲ್ಲೂಕಿನ ಕುಪ್ಪಹಳ್ಳಿಯಲ್ಲಿ ನಡೆದ ಮಿರ್ಲೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಶಾಸಕ ಡಿ.ರವಿಶಂಕರ್ ಮಂಗಳವಾರ ವಿಜೇತರಿಗೆ ಬಹುಮಾನ ವಿತರಿಸಿದರು. ಬಿಇಒ ಕೃಷ್ಣಪ್ಪ ಭಾಗವಹಿಸಿದ್ದರು   

ಸಾಲಿಗ್ರಾಮ: ‘ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಗೂ ಆದ್ಯತೆ ನೀಡಿದಾಗ ಮಾತ್ರ ಮಾನಸಿಕ ಒತ್ತಡ ಕಡಿಮೆಯಾಗಿ ಕಲಿಕೆ ಸುಲಭವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಗೆ ಒತ್ತು ನೀಡಬೇಕು’ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ತಾಲ್ಲೂಕಿನ ಮಿರ್ಲೆ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಕುಪ್ಪಹಳ್ಳಿಯಲ್ಲಿ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

‘ಮಕ್ಕಳಿಗೆ ಸ್ಪರ್ಧಾತ್ಮಕ ಮನೋಭಾವ ಮೈಗೂಡಿಸಿಕೊಳ್ಳುವಂತೆ ಮಾಡಲು ಪೋಷಕರು ಕೂಡ ಪ್ರೋತ್ಸಾಹ ನೀಡಬೇಕು. ಇದರಿಂದ ಮಕ್ಕಳು ಉಲ್ಲಾಸದಿಂದ ಕಲಿಕೆಯಲ್ಲಿ ತೊಡಗಿಸಿಕೊಂಡು ಹೆಚ್ಚು ಅಂಕಗಳನ್ನು ಪಡೆಯಲು ಸಹಕಾರಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ತೆಗೆದುಕೊಳ್ಳುವ ಜೊತೆಗೆ ಕ್ರೀಡೆಯಲ್ಲಿ ಕೂಡಾ ಯಶಸ್ವಿಯಾಗಬೇಕು, ಇದಕ್ಕೆ ಅಗತ್ಯವಿರುವ ಪರಿಕರಗಳನ್ನು ಒದಗಿಸಲು ನಾನು ಶಕ್ತಿಮೀರಿ ಶ್ರಮಿಸುತ್ತೇನೆ’ ಎಂದು ಭರವಸೆ ನೀಡಿದರು.

‘ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರೆ ತಾಳ್ಮೆ, ಸಹನೆ, ಗೆಲುವು ಸಾಧಿಸುವ ಹಂಬಲ ಉಂಟಾಗುತ್ತದೆ, ಸೋತರೆ ಮತ್ತೆ ಗೆಲುವು ಪಡೆಯಬೇಕು ಎಂಬ ಮನೋಭಾವ ವೃದ್ಧಿಯಾಗುತ್ತದೆ. ಇದರಿಂದ ಮಕ್ಕಳು ಸಮಾಜದಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್ ಗೀಳಿನಿಂದಾಗಿ ಕ್ರೀಡೆಯಿಂದ ಹೊರ ಉಳಿಯುತ್ತಿರುವುದು ಬೇಸರದ ಸಂಗತಿ’ ಎಂದು ಹೇಳಿದರು.

ಕ್ರೀಡಾಕೂಟದಲ್ಲಿ ಸುಮಾರು 14ಕ್ಕೂ ಹೆಚ್ಚು ಶಾಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದರು.

ಕೆ.ಆರ್.ನಗರ ಕ್ಷೇತ್ರಶಿಕ್ಷಣಾಧಿಕಾರಿ ಕೃಷ್ಣಪ್ಪ, ಅಕ್ಷರ ದಾಸೋಹ ಅಧಿಕಾರಿ ಸ್ವಾಮಿಗೌಡ, ಶಿಕ್ಷಣ ಸಂಯೋಜಕ ಜನಾರ್ಧಾನ್, ಸಿಆರ್‌ಪಿಗಳಾದ ವಸಂತಕುಮಾರ್, ಮಹೇಶ್, ಗಿರೀಶ್, ರಮೇಶ್, ಮುಖ್ಯಶಿಕ್ಷಕರಾದ ಕೃಷ್ಣೇಗೌಡ, ಮಂಜುನಾಥ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.