ADVERTISEMENT

ಮೈಸೂರು: ‘ಹಲಸು ಮೇಳ’ 3ರಿಂದ

ನಂಜರಾಜ ಬಹದ್ದೂರ್‌ ಛತ್ರದಲ್ಲಿ ಎರಡು ದಿನ ಆಯೋಜನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 15:43 IST
Last Updated 30 ಏಪ್ರಿಲ್ 2025, 15:43 IST
‘ಶಂಕರ’ ತಳಿಯ ಹಲಸು
‘ಶಂಕರ’ ತಳಿಯ ಹಲಸು   

ಮೈಸೂರು: ಸಹಜ ಸಮೃದ್ಧ ಮತ್ತು ರೋಟರಿ ಕ್ಲಬ್ ಮೈಸೂರು ಪಶ್ಚಿಮ ಸಹಯೋಗದಲ್ಲಿ ಇಲ್ಲಿನ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಮೇ 3 ಹಾಗೂ 4ರಂದು ‘ಹಲಸು ಮೇಳ’ ಆಯೋಜಿಸಲಾಗಿದೆ.

ಕೆಂಪು, ಹಳದಿ ಮತ್ತು ಬಿಳಿ ಹಲಸಿನ ತಳಿ ಹಣ್ಣುಗಳು ದೊರೆಯಲಿವೆ. ಹಲಸಿನ ಐಸ್ ಕ್ರೀಂ, ಚಿಪ್ಸ್‌, ಚಾಕೊಲೆಟ್, ಹಪ್ಪಳ, ಹಲ್ವಾ, ಕಬಾಬ್, ಹೋಳಿಗೆ, ವಡೆ, ದೋಸೆ, ಪಲ್ಯ, ಬಿರಿಯಾನಿ ಮಳಿಗೆಗಳು ಬರಲಿವೆ. ಹಲಸಿನ ಮೌಲ್ಯವರ್ಧಿತ ಪದಾರ್ಥಗಳು ಮತ್ತು ಹಲಸು ಹೆಚ್ಚುವ ಯಂತ್ರ ಸಿಗಲಿದೆ.

ಎಚ್‌.ಡಿ. ಕೋಟೆ, ಕೊಳ್ಳೇಗಾಲ, ಪಿರಿಯಾಪಟ್ಟಣ, ಕೆ.ಆರ್.ಪೇಟೆ, ತುಮಕೂರು, ಹಾವೇರಿ, ಮತ್ತು ಶಿವಮೊಗ್ಗ ಭಾಗದ ಹಲಸಿನ ಬೆಳೆಗಾರರು ಹಣ್ಣುಗಳನ್ನು ಮಾರಾಟಕ್ಕೆ ತರಲಿದ್ದಾರೆ. ಚೇಳೂರಿನ ಕೆಂಪು ಹಲಸು, ನಾಗರಹೊಳೆ ಕಾಡಿನ ಬಿಳಿ ಮತ್ತು ಕೊಡಗಿನ ರುದ್ರಾಕ್ಷಿ ಹಲಸು ಸವಿಯಲು ಸಿಗಲಿದೆ.  

ADVERTISEMENT

ಕರ್ನಾಟಕ, ಕೇರಳ, ಮಲೇಶಿಯ, ವಿಯೆಟ್ನಾಂ ಮೊದಲಾದ ಕಡೆಗಳ ಹೆಸರಾಂತ ಹಲಸಿನ ತಳಿಗಳ ಕಾಯಿ ಮತ್ತು ಹಣ್ಣು ಪ್ರದರ್ಶನಕ್ಕೆ ಬರಲಿದೆ. ಮೇ 3ರಂದು ಬೆಳಿಗ್ಗೆ 11ಕ್ಕೆ ರೈತರಿಗಾಗಿ ‘ಹಲಸಿನ ಸಾಗುವಳಿ ಮತ್ತು ಮಾರುಕಟ್ಟೆ’ ಕುರಿತು ತರಬೇತಿ ಕಾರ್ಯಕ್ರಮವಿದೆ. ಹಲಸಿನ ತಜ್ಞರು ಮಾಹಿತಿ ನೀಡಲಿದ್ದಾರೆ. ಡೆಂಗ್ ಸೂರ್ಯ, ರುದ್ರಾಕ್ಷಿ ಬಕ್ಕೆ, ತೂಬಗೆರೆ, ಬೈರಸಂದ್ರ, ಸರ್ವ ಋತು, ಲಾಲ್‌ಬಾಗ್  ಮಧುರ, ಥಾಯ್ ರೆಡ್, ವಿಯಟ್ನಾಂ ಸೂಪರ್ ಹರ್ಲಿ, ಗಮ್ ಲೆಸ್, ನಾಗಚಂದ್ರ, ರಾಮಚಂದ್ರ ಮೊದಲಾದ 25ಕ್ಕೂ ಹೆಚ್ಚಿನ ಹಲಸಿನ ತಳಿಯ ಗಿಡಗಳು ಮಾರಾಟಕ್ಕೆ ಲಭ್ಯವಿರಲಿವೆ.

‘ರಾಜ್ಯದ ವಿವಿಧೆಡೆಯ ಗ್ರಾಮೀಣ ಉದ್ದಿಮೆದಾರರು, ರೈತ ಕಂಪನಿಗಳವರು, ರೈತ ಮತ್ತು ಮಹಿಳಾ ಗುಂಪಿನವರು ಹಲಸಿನ ಮೌಲ್ಯವರ್ಧಿತ ಪದಾರ್ಥಗಳು, ಸಿರಿಧಾನ್ಯ, ಸಾವಯವ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳನ್ನು ಮಾರಾಟಕ್ಕೆ ತರಲಿದ್ದಾರೆ. ತರಕಾರಿ  ಬೀಜ, ದೇಸಿ ಭತ್ತ ಮತ್ತು ಸಿರಿಧಾನ್ಯಗಳು ಕೂಡ ಲಭ್ಯವಿರಲಿವೆ. ಹೆಚ್ಚಿನ ಮಾಹಿತಿಗೆ ಮೊ.ಸಂ. 94821 15495 (ಸುಹಾಸ್) ಸಂಪರ್ಕಿಸಬಹುದು’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದಲ್ಲೇ ಮೊದಲ ಬಾರಿಗೆ ಸಸ್ಯ ತಳಿ ಸಂರಕ್ಷಣೆ ಮತ್ತು ರೈತರ ಹಕ್ಕು ಪ್ರಾಧಿಕಾರದಲ್ಲಿ ನೊಂದಣಿಯಾಗಿರುವ ‘ಸಿದ್ಧು’ ಮತ್ತು ‘ಶಂಕರ’ ಕೆಂಪು ಹಲಸಿನ ತಳಿಗಳ ಗಿಡಗಳು ಮಾರಾಟಕ್ಕೆ ಸಿಗಲಿವೆ
ಕೃಷ್ಣಪ್ರಸಾದ್ ನಿರ್ದೇಶಕ ಸಹಜ ಸಮೃದ್ಧ

ಕೃಷ್ಣಮೂರ್ತಿ ಬಿಳಿಗೆರೆ ಚಾಲನೆ

ಕವಿ ಮತ್ತು ಹಲಸು ಬೆಳೆಗಾರ ಕೃಷ್ಣಮೂರ್ತಿ ಬಿಳಿಗೆರೆ ಮೇಳವನ್ನು ಉದ್ಘಾಟಿಸಲಿದ್ದಾರೆ. ರೈತ ಶಿವನಾಪುರದ ರಮೇಶ್ ರೋಟರಿ ಕ್ಲಬ್ ಮೈಸೂರು ಪಶ್ಚಿಮದ ಅಧ್ಯಕ್ಷ ನಾಗೇಶ್ ಎಂ.ಎಲ್. ಮತ್ತು ಕಾರ್ಯದರ್ಶಿ ದೇವರಾಜು ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಶನಿವಾರ ಸಂಜೆ ಹಲಸು ಎತ್ತುವ ಮತ್ತು ಹಲಸಿನ ತೂಕ ಊಹಿಸುವ ಸ್ಫರ್ಧೆ ನಡೆಯಲಿದೆ. ಮೇ 4ರಂದು ಮಧ್ಯಾಹ್ನ 2ಕ್ಕೆ ‘ಹಲಸಿನ ಹಣ್ಣು ತಿನ್ನುವ ಸ್ಪರ್ಧೆ’ ಏರ್ಪಡಿಸಲಾಗಿದೆ. ನಿಗದಿತ ಸಮಯದಲ್ಲಿ ಹೆಚ್ಚು ಹಲಸಿನ ಹಣ್ಣಿನ ತೊಳೆ ತಿಂದವರನ್ನು ವಿಜೇತರಾಗಿ ಘೋಷಿಸಿ ಬಹುಮಾನ ನೀಡಲಾಗುತ್ತದೆ. ಮಕ್ಕಳು ಮತ್ತು ಹಿರಿಯರಿಗೆ ‘ಮನೆಯಲ್ಲಿ ಹಲಸಿನ ಚಿತ್ರ ಬರೆಯಿರಿ: ಮೇಳಕ್ಕೆ ತಂದು ಪ್ರದರ್ಶಿಸಿ’ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಸಹಜ ಸಮೃದ್ಧ ನಿರ್ದೇಶಕ ಕೃಷ್ಣಪ್ರಸಾದ್‌ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.