ಹುಣಸೂರು: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಗರದ ಆರೋಗ್ಯ ಇಲಾಖೆಯ ವೈದ್ಯ ಮತ್ತು ಅರೆ ವೈದ್ಯ ಇಲಾಖೆ ಸಿಬ್ಬಂದಿ ಒಂದು ಗಂಟೆ ಕರ್ತವ್ಯದಿಂದ ಹೊರಗುಳಿದು ಶನಿವಾರ ಪ್ರತಿಭಟಿಸಿದರು.
ಆರೋಗ್ಯ ಇಲಾಖೆ ಕ್ಷೇತ್ರ ಸಮನ್ವಯಾಧಿಕಾರಿ ಲಕ್ಷ್ಮಿ ಮಾತನಾಡಿ, ‘ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್ ಸಾಂಕ್ರಾಮಿಕ ರೋಗದ ನಡುವೆಯೂ ರಜೆ ಇಲ್ಲದೆ ಸರ್ಕಾರದ ಎಲ್ಲಾ ಆದೇಶವನ್ನು ಪಾಲಿಸುತ್ತಿದ್ದೇವೆ. ಕೋವಿಡ್ ಸಂಕಷ್ಟದಲ್ಲೂ ವೈದ್ಯರು ಸೂಚಿಸುವ ಎಲ್ಲಾ ಕೆಲಸ ನಿರ್ವಹಿಸಿದ್ದರೂ ಗುತ್ತಿಗೆ ಸಿಬ್ಬಂದಿಗೆ ಯಾವುದೇ ರೀತಿ ಧನ ಸಹಾಯ ಇಲ್ಲವಾಗಿದೆ’ ಎಂದರು.
ಕೋವಿಡ್ ಕೇರ್ ಸೆಂಟರ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ಪ್ರೋತ್ಸಾಹ ಧನ ಸಹಾಯ ಹಾಗೂ ಸಾಮಾಜಿಕ ಭದ್ರತೆ ನೀಡಬೇಕು. ಇದಲ್ಲದೆ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರದ ತಾರತಮ್ಯತೆ ವಿರೋಧಿಸಿ ಸಾಂಕೇತಿಕವಾಗಿ ಒಂದು ಗಂಟೆ ಕರ್ತವ್ಯದಿಂದ ಹೊರಗುಳಿದಿದ್ದು. ಮುಂದಿನ ದಿನದಲ್ಲಿ ಹೋರಾಟದ ಸ್ವರೂಪ ಬದಲಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಡಾ.ನೇತ್ರಾ ಹೇಳಿದರು.
ಪ್ರತಿಭಟನೆಯಲ್ಲಿ 50 ಸಿಬ್ಬಂದಿ ಭಾಗವಹಿಸಿದ್ದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.