ಹುಣಸೂರು: ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿಸಂಸದ ಪ್ರತಾಪ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕಪ್ಪು ಪಟ್ಟಿ ಪ್ರದರ್ಶಿಸಲು ಯತ್ನಿಸಿದ ವಿವಿಧ ಸಂಘಟನೆಗಳ ಸದಸ್ಯರನ್ನು ಪೊಲೀಸರು ಕಲ್ಕುಣಿಕೆ ವೃತ್ತದಲ್ಲಿ ಬಂಧಿಸಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಗ್ರಾಮೀಣ ದಸರಾ ಕಾರ್ಯಕ್ರಮದಲ್ಲಿ ಪ್ರತಾಪಸಿಂಹ ಭಾಗವಹಿಸುವುದಕ್ಕೆ ವಿರೋಧಿಸಿ ಪ್ರತಿಭಟಿಸಲು ಮುಂದಾದರು. ಪ್ರತಿಭಟನಾಕಾರರನ್ನು ಮುಂಜಾಗ್ರತೆ ಕ್ರಮವಾಗಿ ಪೊಲೀಸರು ಬಂಧಿಸಿದರು.
ಪ್ರತಾಪಸಿಂಹ ಅವರು, ಮಹಿಷ ದಸರಾ ಕುರಿತಂತೆ ಮೈಸೂರಿನಲ್ಲಿ ದಲಿತರ ವಿರುದ್ಧ ನೀಡಿದ್ದ ಹೇಳಿಕೆಯನ್ನು ಖಂಡಿಸಿದ ದಸಂಸ ಸದಸ್ಯರು, ಪ್ರತಿಭಟಿಸುವ ಎಚ್ಚರಿಕೆ ನೀಡಿದ್ದರು.
ಬಂಧನ: ಆದಿಜಾಂಬವ ಯುವ ವೇದಿಕೆ ಅಧ್ಯಕ್ಷ ಹಾಗೂ ವಕೀಲ ಪುಟ್ಟರಾಜ್, ಕಮ್ಯುನಿಷ್ಟ್ ಪಕ್ಷದ ಮುಖಂಡ ಜಗದೀಶ್ ಸೂರ್ಯ ಸೇರಿದಂತೆ 20ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು.
ಈ ಸಂಬಂಧ ಡಿವೈಎಸ್ಪಿ ಸುಂದರ್ ರಾಜ್ ಮಾತನಾಡಿ, ‘ಪ್ರತಿಭಟನಾಕಾರರಿಗೆ ಮನವೊಲಿಸಿದ್ದು, ನಾಡಹಬ್ಬಕ್ಕೆ ಅಡ್ಡಿಪಡಿಸದಂತೆ ಮನವಿ ಮಾಡಲಾಗಿತ್ತು. ಪ್ರತಿಭಟನೆ ಮಾಡಿದ್ದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಗ್ರಾಮೀಣ ದಸರಾ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಲು ಹೆಚ್ಚುವರಿಯಾಗಿ 100 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.