ADVERTISEMENT

ಔಷಧ ಉತ್ಪಾದನೆಯಲ್ಲಿ ಭಾರತ ಸುಸ್ಥಿರ

ರಾಜ್ಯ ಸರ್ಕಾರದ ಔಷಧ ನಿಯಂತ್ರಕ ಅಮರೇಶ್ ತುಂಬಗಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 15:45 IST
Last Updated 8 ಡಿಸೆಂಬರ್ 2018, 15:45 IST
ಮೈಸೂರಿನ ಜೆಎಸ್‌ಎಸ್‌ ಔಷಧ ಕಾಲೇಜಿನಲ್ಲಿ ಶನಿವಾರ ನಡೆದ ರಾಷ್ಟ್ರೀಯ ಔಷಧ ಸಪ್ತಾಹ ಕಾರ್ಯಕ್ರಮದಲ್ಲಿ ವೈದ್ಯರಾದ ಎಂ.ರಮೇಶ್, ಬಿ.ಕೆ.ಸುರೇಶ್, ಮಂಜುನಾಥ್, ಅಮನ್ ಉಲ್ಲಾ ಖಾನ್ ಅವರಿಗೆ ‘ಔಷಧ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು
ಮೈಸೂರಿನ ಜೆಎಸ್‌ಎಸ್‌ ಔಷಧ ಕಾಲೇಜಿನಲ್ಲಿ ಶನಿವಾರ ನಡೆದ ರಾಷ್ಟ್ರೀಯ ಔಷಧ ಸಪ್ತಾಹ ಕಾರ್ಯಕ್ರಮದಲ್ಲಿ ವೈದ್ಯರಾದ ಎಂ.ರಮೇಶ್, ಬಿ.ಕೆ.ಸುರೇಶ್, ಮಂಜುನಾಥ್, ಅಮನ್ ಉಲ್ಲಾ ಖಾನ್ ಅವರಿಗೆ ‘ಔಷಧ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು   

ಮೈಸೂರು: ಭಾರತದ ಔಷಧ ಉತ್ಪಾದನಾ ಘಟಕಗಳು ಈಗ ಸುಸ್ಥಿರಗೊಂಡಿದ್ದು, ವಿದೇಶಗಳಿಗೆ ಔಷಧ ರಫ್ತಾಗುತ್ತಿದೆ ಎಂದು ರಾಜ್ಯ ಸರ್ಕಾರದ ಔಷಧ ನಿಯಂತ್ರಕ ಅಮರೇಶ್ ತುಂಬಗಿ ತಿಳಿಸಿದರು.

ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಜೆಎಸ್‍ಎಸ್ ಔಷಧ ಮಹಾವಿದ್ಯಾಲಯ ಹಾಗೂ ಭಾರತೀಯ ಔಷಧ ಸಂಘದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಔಷಧ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಿಂದ ಈಗ 195 ರಾಷ್ಟ್ರಗಳಿಗೆ ಔಷಧ ರಫ್ತಾಗುತ್ತಿದೆ. 3 ಸಾವಿರಕ್ಕೂ ಹೆಚ್ಚು ಉತ್ಪನ್ನಗಳು ವಿದೇಶಿ ಪ್ರಜೆಗಳು ಬಳಸುತ್ತಿದ್ದಾರೆ. ರಾಜ್ಯದಲ್ಲೂ ಔಷಧ ಉತ್ಪಾದನಾ ಘಟಕಗಳು ಉತ್ತಮ ಕಾರ್ಯಕ್ಷಮತೆ ತೋರುತ್ತಿವೆ ಎಂದು ತಿಳಿಸಿದರು.

ADVERTISEMENT

‘ಔಷಧ ಹಾಗೂ ವೈದ್ಯಕೀಯ ಖರ್ಚಿಗಾಗಿ ನಮ್ಮ ಆದಾಯದಲ್ಲಿ ಉಳಿತಾಯ ಮಾಡಬೇಕು. ಆರೋಗ್ಯ ವಿಮೆಗೆ ಹೆಚ್ಚಿನ ಪ್ರಾಧ್ಯಾನ್ಯತೆ ನೀಡಬೇಕು. ಮುಂದುವರೆದ ರಾಷ್ಟ್ರಗಳಲ್ಲಿ ಶೇ 16ರಷ್ಟು ಆದಾಯದ ಪಾಲನ್ನು ಆರೋಗ್ಯಕ್ಕಾಗಿ ಮುಡಿಪಾಗಿಡುತ್ತಾರೆ. ಈ ಅಭ್ಯಾಸ ನಮ್ಮಲ್ಲೂ ಬೆಳೆಯಬೇಕು’ ಎಂದು ಅವರು ಕಿವಿಮಾತು ಹೇಳಿದರು.

ಶಿಕ್ಷಣ ಸಂಸ್ಥೆಗಳಲ್ಲಿ ಔಷಧ ಸಂಶೋಧನೆ ಹೆಚ್ಚಬೇಕು. ವಿಶ್ವವಿದ್ಯಾಲಗಳಲ್ಲಿ ಈ ಕುರಿತು ಜ್ಞಾನ ಸಮ್ಮಿಲನ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರವು ಹೆಚ್ಚಿನ ಗಮನ ಹರಿಸುತ್ತಿದ್ದು, ಶಿಕ್ಷಣ ಸಂಸ್ಥೆಗಳು ತಮ್ಮ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ವೈದ್ಯರಾದ ಎಂ.ರಮೇಶ್, ಬಿ.ಕೆ.ಸುರೇಶ್, ಮಂಜುನಾಥ್, ಅಮನ್ ಉಲ್ಲಾ ಖಾನ್ ಅವರಿಗೆ ‘ಔಷಧ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಬಿ.ಸುರೇಶ್, ಫರೂಕಿಯಾ ಔಷಧ ಕಾಲೇಜಿನ ಪ್ರಾಂಶುಪಾಲ ಡಾ.ಸಲಾವುದ್ದೀನ್, ಜೆಎಸ್‍ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದ್‍ಕುಮಾರ್, ಭಾರತೀಯ ಔಷಧ ಸಂಘದ ಕಾರ್ಯದರ್ಶಿ ಡಾಆರ್.ಎಸ್.ಚಂದನ್, ಔಷಧ ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಕೃಷ್ಣ, ಸಹಾಯಕ ಪ್ರಾಧ್ಯಾಪಕ ಮಹೇಂದ್ರನ್, ಪ್ರಾಧ್ಯಾಪಕ ಜಿ.ವಿ.ಪೂಜಾರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.